ಸಿಪಾಯಿ ದಂಗೆ ಅಂತ ಕರೆದರೆ ರಾಷ್ಟ್ರೀಯ ಅವಮಾನ
September 17th, 2008.
“ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ೧೫೦ ವರ್ಷ”
’೧೮೫೭ ಸಿಪಾಯಿದಂಗೆ’ ಹಾಗಂತಲೇ ಬ್ರಿಟಿಷರು ಅದನ್ನು ಕರೆದಿದ್ದರು. ಬ್ರಿಟಿಷ್ ಇತಿಹಾಸವೂ ಹಾಗಂತಲೇ ಹೇಳುತ್ತದೆ. ನಮ್ಮ ಇತಿಹಾಸದ ಪಠ್ಯಗಳೂ ಅದೇ ಗುಲಾಮಿತನವನ್ನು ಮುಂದುವರಿಸಿವೆ. ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರ ಅಸ್ತಿತ್ವವನ್ನು ಬುಡಸಹಿತ ಅಲ್ಲಾಡಿಸಿದ ಅತ್ಯಂತ ಶಕ್ತಿಶಾಲಿ ಸಂಘರ್ಷವದು. ತಮ್ಮ ಅಡಿಯಾಳಾಗಿದ್ದ ಜನರು ಸ್ವಾತಂತ್ರ್ಯಕ್ಕಾಗಿ ಸಿಡಿದೆದ್ದು ರಕ್ತ ಚೆಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ ಬ್ರಿಟಿಷರು ಅದನ್ನು ’ದಂಗೆ’ ಅಂತ ಕರೆದಿದ್ದು ಸಹಜವೇ. ಆದರೆ ನಮ್ಮದೇ ತಾಯಿಯ ಮುಕ್ತಿಗಾಗಿ ನಮ್ಮದೇ ನಾಡಿನ ದಾಸ್ಯ ವಿಮೋಚನೆಗಾಗಿ ನಮ್ಮದೇ ನಾಡಿನ ಮಕ್ಕಳು ಅಸೀಮ ಶೌರ್ಯಸಾಹಸಗಳನ್ನು ಪ್ರದರ್ಶಿಸಿ ಪ್ರಾಣಾರ್ಪಣೆಗೈದ ಮಹಾಸಂಗ್ರಾಮವನ್ನು ಬ್ರಿಟಿಷರಂತೆ ನಾವೂ ದಂಗೆ ಅಂತ ಕರೆದರೆ ಆ ಚೇತನಗಳಿಗೆ, ನಮ್ಮ ಹಿರಿಯರಿಗೆ ನಾವು ತೋರುವ ಅಗೌರವವಲ್ಲದೆ ಮತ್ತೇನು? ಇಂಗ್ಲೀಷ್ ಗುಲಾಮಿತನವನ್ನೇ ಮೈ ತುಂಬಾ ತುಂಬಿಕೊಂಡಿರುವ ನಮ್ಮ ಇತಿಹಾಸದ ಪಠ್ಯಗಳನ್ನು ಧಿಕ್ಕರಿಸಿ ಸತ್ಯವನ್ನರಿತು ’೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ವೆಂದು ಸ್ವಾಭಿಮಾನದಿಂದ ಎದೆತಟ್ಟಿ ಹೇಳದಿದ್ದರೆ ಅದೊಂದು ರಾಷ್ಟ್ರೀಯ ಅವಮಾನ.
೧೫೦ ವರ್ಷಗಳ ಹಿಂದೆ ಈ ಮಹಾಸಂಗ್ರಾಮದಿಂದ ಸೂರ್ಯ ಮುಳುಗದ ಸಾಮ್ರಾಜ್ಯ ಅಲ್ಲಾಡಿ ಹೋಗಿತ್ತು. ಯಾರನ್ನು ಅನಾಗರಿಕರು, ಗುಲಾಮರು, ಏನೂ ಅರಿಯದವರು ಎಂದು ಬ್ರಿಟನ್ ಮೂದಲಿಸಿತ್ತೋ ಅದೇ ಜನ ಅಂದು ’ತಾಯ್ನಾಡಿಗಾಗಿ ಪ್ರಾಣಾರ್ಪಣೆಗೂ ಸಿದ್ಧ’ ಎಂದು ಸಾಧಿಸಿ ತೋರಿಸಿದ್ದರು. ಮಾತೃ ಭೂಮಿ ಸಂಕಷ್ಟಕ್ಕೆ ಸಿಲುಕಿದಾಗ ಈ ನಾಡಿನ ಪುರುಷರಷ್ಟೇ ಅಲ್ಲ, ಮಹಿಳೆಯರೂ ಬಲಿದಾನಗೈಯಬಲ್ಲರು ಎಂಬ ಸಂದೇಶ ಸಾರಿ ಶ್ರೇಷ್ಠ ಪರಂಪರೆಗೆ ನಾಂದಿ ಹಾಡಿದ ಸಂಗ್ರಾಮವದು. ಝಾನ್ಸಿಲಕ್ಷ್ಮೀ ಬಾಯಿಯಂತಹ ಒಬ್ಬ ಸ್ತ್ರೀರತ್ನವನ್ನು ಬ್ರಿಟಿಷರು ತಮ್ಮ ಇಡೀ ಇತಿಹಾಸದಲ್ಲಿಯೇ ಕಂಡಿರಲಿಲ್ಲ. ಅಲ್ಲಿಯವರೆಗೆ ಗುಲಾಮಿತನವೇ ಅಭ್ಯಾಸವಾಗಿ ಹೋಗಿದ್ದ ಭಾರತೀಯರಲ್ಲಿ ಈ ಸಂಗ್ರಾಮದ ಮೂಲಕ ಹೊಸ ಶಕ್ತಿ. ಹುಮ್ಮಸ್ಸು, ಆತ್ಮಾಭಿಮಾನ ಚಿಮ್ಮಲಾರಂಭಿಸಿತು. ನಾನಾ ಸಾಹೇಬ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ಲಕ್ಷ್ಮೀ ಬಾಯಿ, ಕುವರಸಿಂಹ, ಬೇಗಂ ಹಜರತ್ ಮಹಲ್, ಮಂಗಲ್ ಪಾಂಡೆ ಮುಂತಾದ ಲಕ್ಷಾಂತರ ವೀರ, ಧೀರರ ರಕ್ತ, ಪ್ರಾಣಗಳ ಸಮರ್ಪಣೆಯ ಮೂಲಕ ಸ್ವರಾಜ್ಯ ಮತ್ತು ಸ್ವಧರ್ಮಗಳ ರಕ್ಷಣೆ ಮತ್ತು ಪ್ರತಿಷ್ಠಾಪನೆಗಾಗಿ ನಡೆದ ಪ್ರಬಲ ಹೋರಾಟವದು. ಸಂಗ್ರಾಮ ವಿಫಲವಾಯಿತು ಎಂದು ಬ್ರಿಟಿಷರು ಸಂಭ್ರಮ ಪಟ್ಟರೂ ಅದು ಹೊತ್ತಿಸಿದ ಕ್ರಾಂತಿಯ ಕಿಡಿ, ಆತ್ಮಾಭಿಮಾನ, ಪ್ರೇರಣೆ, ಮಾತೃಭೂಮಿಗಾಗಿ ಬಲಿದಾನಗೈಯುವ ಶ್ರೇಷ್ಠ ಪರಂಪರೆ ೧೯೪೭ ರಲ್ಲಿ ಸ್ವಾತಂತ್ರ್ಯ ಯಜ್ಞ ಸಮಾಪ್ತಿಯಾಗುವವರೆಗೂ ಮುಂದುವರಿದದ್ದು ಸತ್ಯ. ೧೮೫೭ ರ ಸಂಗ್ರಾಮದಿಂದ ಸ್ಫೂರ್ತಿ ಪಡೆದ ವಾಸುದೇವ ಫಡ್ಕೆ, ಚಾಫೇಕರ್ ಬಂಧುಗಳು, ಸಾವರ್ಕರ್ ಸೋದರರು, ಖುದಿರಾಮ ಬೋಸ್, ಅರವಿಂದ ಘೋಷ್, ಭಗತ್ಸಿಂಗ್, ಆಜಾದ್, ಕೊನೆಯಲ್ಲಿ ನೇತಾಜಿ ಸುಭಾಷ್ … ಲಕ್ಷ ಲಕ್ಷ ಮಂದಿ ತಾಯ್ನಾಡಿಗಾಗಿ ಸಮರ್ಪಿತಕೊಂಡರು.
ಅಂತಹ ಮಹಾಸಂಗ್ರಾಮಕ್ಕೆ ೧೫೦ ವರ್ಷದ ಸಂಭ್ರಮ ಮತ್ತೊಮ್ಮೆ ಸ್ವರಾಜ್ಯ ಮತ್ತು ಸ್ವಧರ್ಮ ರಕ್ಷಣೆಯ ಸಂಕಲ್ಪ, ರಾಷ್ಟ್ರ ಜಾಗೃತಿಯ ರಣಕಹಳೆ ಮೂಡಲೇಬೇಕಾದ ಸಂದರ್ಭವಿದು. ನಾನಾ, ತಾತ್ಯಾ. ಶಿವಾಜಿ, ಆಜಾದ್, ಸುಭಾಷ್, ಝಾನ್ಸಿರಾಣಿಯಂತಹ ವೀರ, ಧೀರರ ವಂಶಜರು ನಾವು. ನಾವು ನಿರ್ವೀರ್ಯರಲ್ಲ, ನಮ್ಮಲ್ಲಿ ಹರಿಯುತ್ತಿರುವುದು ತಾಯ್ನಾಡಿಗಾಗಿ ಬದುಕನ್ನು ಅರ್ಪಿಸಿದ. ಶ್ರೇಷ್ಟ ಪರಂಪರೆಯ ರಕ್ತ ಇನ್ನಾದರೂ ಇಂಗ್ಲೀಷ್ ಮಾನಸಿಕತೆಯ ಗುಲಾಮಿತನವನ್ನು ಬಿಟ್ಟು ತಾಯಿ ಭಾರತಿಯನ್ನು ಮತ್ತೊಮ್ಮೆ ವೈಭವೋಪೇತಗೊಳಿಸುವ ಸಂಕಲ್ಪ ಮಾಡೋಣ.
November 9th, 2011 at 7:53 am
nanage idakke sambandisid chithra beku