ಜಗದ ಅಂತರಿಕ್ಷಯಾನ ಮತ್ತು ಭಾರತ
September 17th, 2008.
- ಉದಯ್ ಪಿ.ವಿಟ್ಲ
ಮೊದಲ ಜಾಗತಿಕ ಮಹಾಯುದ್ಧಕ್ಕೆ ಮೊದಲು ಯುದ್ಧ ಅಲ್ಪಸ್ವಲ್ಪ ತಂತ್ರಜ್ಞಾನ, ಚದುರಂಗ ಬಲದ ಆಧಾರದಲ್ಲೇ ನಡೆಯುತ್ತಿತ್ತು. ಆನೆ, ಕುದುರೆ, ರಾಜ, ಕಾಲಾಳುಗಳ ದೈಹಿಕ, ಮಾನಸಿಕ ಸಾಮರ್ಥ್ಯದ ಮೇಲೆ ಜಯಾಪಜಯಗಳ ನಿರ್ಣಯವಾಗತ್ತಿತ್ತು. ಆದರೆ ಮಾನವನ ಸಹಜ ಕುತೂಹಲ ಮತ್ತು ಅನ್ವೇಷಣಾ ಬುದ್ಧಿ ವಿಜ್ಞಾನವನ್ನು ಹುಟ್ಟು ಹಾಕಿತು. ಆತ ಚಿಂತನಾ ಪರಿಧಿಯನ್ನು ಬಾನಿನೆತ್ತರಕ್ಕೇರಿಸಿದ. ಹಕ್ಕಿಯಂತೆ ರೆಕ್ಕೆ ಕಟ್ಟಿ ಹಾರಾಡಲು ಕಲಿಯುವ ಯತ್ನದಿಂದ ಮೊದಲ್ಗೊಂಡು ಸಾವಿರಾರು ಜನರನ್ನು ಏಕಕಾಲದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಭೂ ಪ್ರದೇಶಕ್ಕೆ ತಲುಪಿಸಬಲ್ಲ ಸಾಧನಗಳನ್ನು ಕಂಡುಹಿಡಿದ ಎತ್ತರವಾದ ಪರ್ವತಗಳ ಮೇಲಿಂದ ಕೆಳಕ್ಕೆ ಗುಂಡು ಹಾರಿಸಿ ಎದುರಾಳಿಗಳ ಅಳ್ಳೆದೆ ನಡುಗಿಸುತ್ತಿದ್ದ ಆ ಸಮರ ತಂತ್ರ ಇಂದು ಬಾನೆತ್ತರದಿಂದ ಕ್ಷಿಪಣಿದಾಳಿ, ಬಾಂಬ್ದಾಳಿಗಳವರೆಗೂ ಬೆಳೆದು ನಿಂತಿದೆ. ಇಂದು ದೇಶದ ಅಭಿವೃದ್ಧಿ ಎನ್ನುವುದು ಕೇವಲ ಜನ ಸಂಖ್ಯೆಯಿಂದಷ್ಟೇ ತೀರ್ಮಾನಗೊಳ್ಳುವುದಿಲ್ಲ. ಆ ದೇಶ ವಿಜ್ಞಾನ-ತಂತ್ರಜ್ಞಾನದಲ್ಲಿ ನಿಧಿಸಿರಬಹುದಾದ ಪ್ರಮಾಣದ ಮೇಲೂ ಅವಲಂಬಿತವಾಗಿದೆ. ಅದರ ಫಲವೇ ನಾಸಾ, ಇಸ್ರೋ ಮುಂತಾದ ಬಾಹ್ಯಾಕಾಶ ಸಂಸ್ಥೆಗಳು ಹುಟ್ಟಿರುವುದು. ಆದರೆ ಜಗತ್ತಿನ ಬಾಹ್ಯಾಕಾಶದ ಮಾನಸಿಕ ಸಮರ ಆರಂಭಗೊಂಡಿದ್ದು ರಷ್ಯಾ, ಅಮೇರಿಕಾಗಳ ಶೀತಲ ಸಮರದ ಫಲವಾಗಿ. ರಷ್ಯಾ ೧೯೫೭ರಲ್ಲಿ .ಸ್ಫುಟ್ನಿಕ್. ಎಂಬ ಉಪಗ್ರಹ ಉಡಾಯಿಸಿ ವಿಶ್ವವಿಕ್ರಮ ಸಾಧಿಸಿತು. ೧೯೬೧ರಲ್ಲಿ ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸಿ ಹೊಸಯುಗಕ್ಕೆ ಮುನ್ನುಡಿ ಬರೆಯಿತು. ಆದರೆ ಇದನ್ನು ಪಣವಾಗಿ ಸ್ವೀಕರಿಸಿದ್ದ ಅಮೇರಿಕಾ ಇದಾದ ಹತ್ತೇ ವರ್ಷದಲ್ಲಿ ಚಂದ್ರನ ಮೇಲೊಂದು ಪಯಣ ಕ್ಯೆಗೊಂಡು ಭೂಗ್ರಹದಾಚೆಗೂ ತನ್ನ ಪತಾಕೆಯನ್ನು ಊರಿಬಿಟ್ಟಿತು. ತದನಂತರದ ಬಾಹ್ಯಾಕಾಶ ತಂತ್ರ ಜ್ಞಾನದ ಬೆಳವಣಿಗೆ ಅಗಾಧವಾದದ್ದು. ಅಮೇರಿಕಾ, ಜಪಾನ್, ಚೀನ, ಕೆನಡಾ, ಬ್ರೆಜಿಲ್, ಭಾರತ ಮುಂತಾದ ರಾಷ್ಟ್ರಗಳು ಸ್ವಂತ ಉಪಗ್ರಹ ಕೇಂದ್ರ ಸ್ಥಾಪಿಸಿದವು. ಭಾರತದಲ್ಲಿ ’ವಿಕ್ರಮ್ ಸಾರಾಭಾಯ್’ ನೇತೃತ್ವದಲ್ಲಿ ಇಸ್ರೋ ಆರಂಭ ಗೊಂಡಿತು. ಸಾರಾಭಾಯಿ, ಸತೀಶಧವನ್, ಅಬ್ದುಲ್ಕಲಾಂ, ಯು.ಆರ್. ರಾವ್ ಮೊದಲಾದವರ ಮಾರ್ಗದರ್ಶನದಲ್ಲಿ ಇಸ್ರೋ ಜಾಗತಿಕವಾಗಿಯೂ ಗುರುತಿಸಲ್ಪಟ್ಟಿತು. ಉಪಗ್ರಹಗಳಾಗಲೀ ಇಲ್ಲಾ ಇತರ ಬಾಹ್ಯಕಾಶ ಸಾಧನ ಗಳಾಗಲಿ ಬರಿ ಯುದ್ಧ ಕೇಂದ್ರಿತ ಉದ್ದೇಶಗಳಿಗಾಗಿ ಕಳುಹಿಸುವುದಲ್ಲ ಅಂತರಿಕ್ಷಕ್ಕೆ. ಇಂದಿನ ಜಗತ್ತಿನ ವೇಗದ ನಡಿಗೆಯ ಅಡಿಪಾಯ ಇದೇ. ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನದ ಪ್ರಗತಿ, ಕೃಷಿ, ರಕ್ಷಣೆ, ಶಕ್ಷಣಿಕ, ಸಂಪರ್ಕ, ಗೂಢಚರ್ಯೆ, ಹವಾಮಾನ, ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ, ಸಂಶೋಧನೆ ಹೀಗೆ ಹಲವಾರು ವಿಷಯಗಳ ಮೇಲೂ ತಿಳುವಳಿಕೆಗಾಗಿಯೂ ಉಪಗ್ರಹಗಳನ್ನು ಉಡಾಯಿಸಲಾಗುತ್ತದೆ. ಮಾತ್ರವಲ್ಲ ನವಗ್ರಹಗಳ ಅಧ್ಯಯನ, ಅದರಾಚೆಗಿನ ಕುತೂಹಲ ತಣಿಸುವಿಕೆಗಾಗಿಯೂ ಇದೇ ಉಪಗ್ರಹಗಳ ಬಳಕೆಯಾಗುತ್ತದೆ. ಗ್ರಹದ ಸುತ್ತ ಸುತ್ತುವ ಸಾಧನ ’ಉಪಗ್ರಹ’. ನಮ್ಮ ಮನೆಯಂಗಳದಲ್ಲೇ ಇರುವ ಡಿಶ್ ಆಂಟೆನಾಗಳು ಉಪಗ್ರಹದಿಂದಲೇ ಸಂಕೇತಗಳನ್ನು ಪಡೆಯು ವುದು. ಸೂರ್ಯಕೇಂದ್ರಿತ ಸೌರವ್ಯೂಹದಾಚೆ ಇನ್ನು ಹಲವಾರು ಸೌರವ್ಯೂಹ ಗಳಿವೆ ಮಾತ್ರವಲ್ಲ ಅಲ್ಲೂ ಪ್ರಾಣಿಪ್ರಪಂಚ, ವಿಜ್ಞಾನ ತಂತ್ರಜ್ಞಾನಗಳಿವೆ ಎಂಬ ಊಹೆಯನ್ನೂ ಬಾಹ್ಯಾಕಾಶ ತಂತ್ರಜ್ಞಾನ ಹೊರಹಾಕಿದೆ. ಭಾರತ ಆಂಧ್ರದ ಶ್ರೀ ಹರಿಕೋಟಾ, ಕೇರಳದ ತುಂಬಾ ಮತ್ತು ಒರಿಸ್ಸಾದ ಬಾಲ ಸೋರ್ ಹೀಗೆ ಮೂರು ಕಡೆ ಉಪಗ್ರಹ ಉಡಾವಣೆ ಕೇಂದ್ರ ಹೊಂದಿದೆ. ಇಂತಹ ಉಪಗ್ರಹ ಕೇಂದ್ರಗಳಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ತನ್ನ ನಿಗದಿತ ಗುರಿ ತಲುಪುವ ಮೊದಲು ಭೂಕೇಂದ್ರದ ಪ್ರಧಾನ ನಿರ್ವಹಣಾ ಕೇಂದ್ರ ಕಳುಹಿಸುವ ಆಜ್ಞೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ. ಮಾತ್ರವಲ್ಲ ತನ್ನ ನಿಗದಿತ ಕಕ್ಷೆಗೆ ಸೇರಿದ ನಂತರ ತನ್ನ ಚಟುವಟಿಕೆಯನ್ನು ಆರಂಭಿಸುತ್ತದೆ. ಉಪಗ್ರಹಗಳ ಜೀವಿತಾವಧಿ ಹೆಚ್ಚೆಂದರೆ ೧೨ ವರ್ಷ, ತಮ್ಮ ಜೀವಿತ ಕಳೆದ ಸುಮಾರು ೨೩,೦೦೦ ಕ್ಕೂ ಹೆಚ್ಚು ಉಪಗ್ರಹಗಳು, ಬಾಹ್ಯಾಕಾಶದ ಕಕ್ಷೆಯಲ್ಲಿವೆ ಮಾತ್ರವಲ್ಲ ಇವು ಬಾಹ್ಯಾಕಾಶದ ’ಕಸಗಳು’. ಬಾಹ್ಯಾಕಾಶದಲ್ಲಿ ತೇಲುತ್ತಿರುವ ಇಂತಹ ’ಕಸ’ಗಳ ವಿಲೇವಾರಿಯೂ ಬಾಹ್ಯಾಕಾಶ ಸಂಸ್ಥೆಗಳ ತಲೆನೋವಿಗೆ ಕಾರಣ. ಸೌರಮಂಡಲದ ಗ್ರಹಗಳ ಪೈಕಿ ಮಂಗಳ ಸೌರ ವಿಜ್ಞಾನಿಗಳಿಗೆ ಹತ್ತಿರವಾಗಿದೆ. ಭೂಮಿಯ ಸ್ವಾಭಾವಿಕ ಉಪಗ್ರಹ ’ಚಂದ್ರ’ ನೆಡೆಗೂ ದಾಪುಗಾಲಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಸೌರಮಂಡಲದ ನಾಲ್ಕನೇ ಗ್ರಹವಾದ ’ಮಂಗಳ’ ನ ವಾತಾವರಣ ಭೂಮಿಗೆ ಸಮೀಪವಿರುವುದರಿಂದ ಭೂಮಿಯ ಕುರಿತು ಇನ್ನಷ್ಟು ಸಂಶೋಧನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದ ಹಲವು ವೈಜ್ಞಾನಿಕ ಸಂಗತಿಗಳ ಪರಿಶೋಧನೆ ಮಂಗಳದಲ್ಲಿ ವಸಾಹತು ಸ್ಥಾಪನೆ ಎಂಬಿತ್ಯಾದಿಯಾಗಿ ವಿಜ್ಞಾನಿಗಳ ಅಭಿಮತ. ಮಂಗಳದೆಡೆಗೆ ವಿಜ್ಞಾನಿಗಳು ಆಸಕ್ತರಾಗಿರುವಂತೆ ಚಂದ್ರನತ್ತ ಪಯಣವೂ ನಡೆಯುತ್ತಿದೆ. ಇದು ಬಾಹ್ಯಾಕಾಶ ತಂತ್ರಜ್ಞಾನದ ಸವಾಲೂ ಹೌದು.
೧೯೬೯ ರಲ್ಲಿ ಸ್ಥಾಪನೆಯಾದ ಇಸ್ರೋ ಇದುವರೆಗೆ ಸುಮಾರು ೨೨ ಉಪಗ್ರಹಗಳಲ್ಲಿ ೧೯ ನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಬಿಟ್ಟಿದೆ. ಜಗತ್ತಿನ ಬಾಹ್ಯಾಕಾಶ ವಿಜ್ಞಾನದ ಆರು ಪರಿಣತ ದೇಶಗಳ ಪೈಕಿಯೂ ಭಾರತ ಸ್ಥಾನ ಪಡೆದಿದೆ. ಅಮೇರಿಕಾ ಬಾಹ್ಯಾಕಾಶ ಪ್ರಯೋಗಕ್ಕೆ ವರ್ಷವೊಂದಕ್ಕೆ ೧೬ ಬಿಲಿಯನ್ ಡಲರ್, ಜಪಾನ್ ೧.೬ ಬಿಲಿಯನ್ ಡಾಲರ್, ಚೀನಾ ೧.೨ ಬಿಲಿಯನ್ ಡಾಲರ್, ರಷ್ಯಾ ೮೦೦ ಮಿಲಿಯನ್ ಡಾಲರ್ ವ್ಯಯಿಸಿದರೆ ಭಾರತ ೭೦೦ ಮಿಲಿಯನ್ ಡಾಲರ್ ವಿನಿಯೋಗಿಸುತ್ತಿದೆ. ಭಾರತದ ಬಾಹ್ಯಾಕಾಶ ಬಜೆಟ್ನ ಇತಿಮಿತಿಗಳಲ್ಲೂ ಇಸ್ರೋ ಬಹು ಯಶಸ್ಸು ಸಾಧಿಸಿದೆ. ಅದೊಂದು ನಗಣ್ಯ ಬೆಳವಣಿಗೆಯಲ್ಲ ಎಂಬುದು ಬಾಹ್ಯಾಕಾಶ ಪರಿಣತರ ಅಭಿಮತ. ಭಾರತದ ಮಹತ್ವಾಕಾಂಕ್ಷೆ ಚಂದ್ರನತ್ತ ಪಯಣ ’ಚಂದ್ರಯಾನ ೨೦೦೮’ ಕ್ಕೆ ೩೫೦ ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಚಂದ್ರನಲ್ಲಿ ಹೇರಳವಾಗಿ ಸಿಗುವ ’ಹೀಲಿಯಂ’ನ್ನು ಭೂಮಿಗೆ ತಂದು ವಿದ್ಯುತ್ ಉತ್ಪಾದನೆ ಕೈಗೊಂಡರೆ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯ ಮಾತ್ರವಲ್ಲ ಈ ಹೀಲಿಯಂ ಲೆಕ್ಕಾಚಾರಕ್ಕೆ ತೊಡಗಿದರೆ ಚಂದ್ರಯಾನದ ವೆಚ್ಚದ ಮೂರು ಪಟ್ಟು ಬಿಲಿಯನ್ ಡಾಲರ್ಗಳಲ್ಲಿ ಲಾಭ ದೊರೆಯುತ್ತದೆ ಎಂಬ ಅಂದಾಜಿದೆ. ೨೦೦೮ರ ಮಾನವಸಹಿತ ಚಂದ್ರಯಾನ ಇಸ್ರೋದ ಗುರಿಗಳಲ್ಲಿ ಸೇರಿದೆ. ಮಾತ್ರವಲ್ಲ ಚಂದ್ರಯಾನ ಜಗದ ಅಂತರಿಕ್ಷ ವಿಜ್ಞಾನದಲ್ಲಿ ಭಾರತಕ್ಕೊಂದು ಹೊಸ ಗರಿ ಮೂಡಿಸಲಿದೆ. ಈ ದಿಸೆಯಲ್ಲಿಯೂ ಬಾಹ್ಯಾಕಾಶ ವಿಕ್ರಮ ಅರ್ಥಪೂರ್ಣವೇ. ಸಂಶೋಧನೆ, ಅಭಿವೃದ್ಧಿಗಳಂತೆ ಬಾಹ್ಯಾಕಾಶ ಪ್ರವಾಸೀ ಉದ್ದೇಶಗಳಿಗಾಗಿಯೂ ಉಪಯೋಗಿಸ ಲ್ಪಡುತ್ತಿದೆ. ಬಾಹ್ಯಾಕಾಶದ ಪ್ರಥಮ ಪ್ರವಾಸಿ ಚಾರ್ಲ್ಸ್ ವಾಕರ್ ಔಷಧದ ಮೇಲಿನ ಪರಿಶೋಧನೆಗಾಗಿ ೧೯೮೪ ರಲ್ಲಿ ಭೂ ಪ್ರದಕ್ಷಿಣೆ ಕೈಗೊಂಡಿದ್ದ. ೧೯೮೦ರಲ್ಲಿ ಜಪಾನಿನ ಟೋಕಿಯೋ ಬ್ರಾಡ್ ಕಾಸ್ಟಿಂಗ್ ಸಂಸ್ಥೆ ರಷ್ಯಾ ಬಾಹ್ಯಾಕಾಶ ಸಂಸ್ಥೆಗೆ ೧೦೦ ದಶ ಲಕ್ಷ ಡಾಲರ್ ವೆಚ್ಚದಲ್ಲಿ ೭ ದಿನಗಳ ವಸತಿಗಾಗಿ ಬಾಹ್ಯಾಕಾಶಕ್ಕೆ ಕಳಿಸಿ, ನಷ್ಟದಿಂದ ನಲುಗಿದ್ದ ರಷ್ಯಾ ಬಾಹ್ಯಾಕಾಶ ಕೇಂದ್ರಕ್ಕೆ ಚೇತರಿಕೆ ಕೊಟ್ಟಿತ್ತು. ಇತ್ತೀಚೆಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಅಮೇರಿಕಾದ ಪ್ರವಾಸೀ ಬಾಹ್ಯಾಕಾಶ ಸಂಸ್ಥೆ ಭೂಪ್ರದಕ್ಷಿಣೆ ಹೊಡೆಯುವ ಪ್ರವಾಸಕ್ಕೆ ೨೦ ದಶಲಕ್ಷ, ಅರ್ಧ ಪ್ರದಕ್ಷಿಣೆಗೆ ಒಂದು ದಶಲಕ್ಷ ಡಾಲರ್ ವೆಚ್ಚ ಪ್ರಕಟಿಸಿದೆ. ಈಗಾಗಲೇ ಕಿರುಪ್ರವಾಸಕ್ಕೆ ೧೦,೦೦೦ ಜನ, ಭೂಪ್ರದಕ್ಷಿಣೆಗೆ ೬೦ ಜನ ಗ್ರಾಹಕರು ಸರತಿಸಾಲಿನಲ್ಲಿದ್ದಾರೆಂಬ ಸುದ್ದಿ ಇದೆ. ಈ ಬಾಹ್ಯಾಕಾಶ ಪ್ರವಾಸ ೧೦೦ ಕೋಟಿ ಡಾಲರ್ಗೂ ಮಿಗಿಲಾದ ಲಾಭ ತರುವ ಉದ್ದಿಮೆಯಾಗಲಿದೆ ಎಂಬುದು ಬಾಹ್ಯಾಕಾಶ ಪರಿಣತರ ಅಭಿಮತ ಮತ್ತು ಆಶಯ. ಒಟ್ಟಿನಲ್ಲಿ ಬಾಹ್ಯಾಕಾಶ ಎನ್ನುವುದು ಹೇಗೆ ಕುತೂಹಲಕ್ಕೆ ಕಾರಣವೋ ಹಾಗೆಯೇ ದೇಶದ ಭದ್ರತೆ, ರಕ್ಷಣೆಯನ್ನೊಳಗೊಂಡ ಸರ್ವತೋಮುಖ ಬೆಳವಣಿಗೆಯ ಅತೀ ಮುಖ್ಯ ಅಂಗ. ಒಟ್ಟಿನಲ್ಲಿ ಬಾಹ್ಯಾಕಾಶದ ವಿಕ್ರಮ ಆ ದೇಶದ ವಿಜಯದ ಕೀರ್ತಿ ಪತಾಕೆಯು ಹೌದು.
November 27th, 2009 at 1:46 am
good subject
April 27th, 2010 at 12:58 am
where intersting
October 1st, 2011 at 2:48 am
very fentastic and interesting beautiful messages