ಎದ್ದೇಳು ನಡೆ ಮುಂದೆ, ಮಾಡು ಇಲ್ಲವೆ ಮಡಿ ಯುವಶಕ್ತಿಯ ಸ್ಫೂರ್ತಿ ಭಗವದ್ಗೀತೆ
September 17th, 2008.

-ಶ್ರೀ ಕೊಕ್ಕಡ ವೆಂಕಟರಮಣ ಭಟ್.
ನೂರಾರು ವರ್ಷಗಳಿಂದ ಈ ದೇಶದಯುವಶಕ್ತಿಗೆ ಸ್ಫೂರ್ತಿಯೂ, ಪ್ರೇರಣಾಸ್ರೋತವೂ ಆಗಿರುವ ಭಗವದ್ಗೀತೆ ಕೇವಲ ಒಂದು ಧರ್ಮಗ್ರಂಥವಲ್ಲ, ಅದೊಂದು ಮನಶ್ಯಾಸ್ತ್ರ. ’ಜಗತ್ತಿನ ಒಳಿತಿಗಾಗಿ ಅರ್ಜುನನ್ನು ನೆಪವಾಗಿಟ್ಟು ಕೊಂಡು ಮಾನವ ಮಾತ್ರರಿಗಾಗಿ ಇದನ್ನು ಉಪದೇಶಿಸಿದ್ದೇನೆ’ ಎನ್ನುತ್ತಾನೆ ಗೀತಾ ಚಾರ್ಯ ಕೃಷ್ಣ. ಇದು ಎಲ್ಲಾ ದೇಶಕ್ಕೆ ಎಲ್ಲಾ ಕಾಲಕ್ಕೆ ಎಲ್ಲಾ ಧರ್ಮಗಳಿಗೆ ಅನ್ವಯವಾಗಬಲ್ಲ ಜ್ಞಾನವಾಹಿನಿ. ಇಂತಹ ವಿಶಾಲ ವಿಶ್ವ ಚಿಂತನೆಯ, ಉದಾರ ದೃಷ್ಟಿಯ, ಜಗತ್ತಿನ ಅತಿಶ್ರೇಷ್ಠ ಗ್ರಂಥದ ಕುರಿತ ನಮ್ಮ ಪೂರ್ವಗ್ರಹಗಳು, ಉದಾಸೀನತೆಗಳು ಬದಲಾಗಬೇಕಿದೆ. ಮಾನಸಿಕ ಖಿನ್ನತೆ, ಆತ್ಮವಿಶ್ವಾಸದ ಕೊರತೆ, ಆತ್ಮಹತ್ಯೆಯ ಚಿಂತನೆ, ಅಜ್ಞಾನದ ಅಂಧಕಾರ ಆವರಿಸಿರುವ ಇಂತಹ ಹೊತ್ತಿನಲ್ಲಿ ಗೀತಾತತ್ವದ ಬೆಳಕು ನಮ್ಮ ಯುವಜನತೆಯಲ್ಲಿ ಪಸರಿಸಿದರೆ ಭಾರತದ ಚಿತ್ರಣವೆ ಬದಲಾದೀತು. ಗೀತಾಮೃತದ ಅಮೃತವಾಹಿನಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಿದ್ದಾರೆ ಕೊಕ್ಕಡ ವೆಂಕಟರಮಣ ಭಟ್. ಕರ್ತವ್ಯ ಕರ್ಮದ ಕರೆ ಒತ್ತರಿಸಿ ಬಂದಾಗ ಜ್ಞಾನದ ಬೆಳಕಿನಿಂದ ವಂಚಿತನಾದವನು ಕಳವಳ- ಗೊಂದಲ-ಒತ್ತಡ-ಕಾತರ- ವ್ಯಾಕುಲತೆಗಳಿಂದ ಮುಗ್ಗರಿಸುತ್ತಾನೆ. ವಿಶೇಷವಾಗಿ, ಯುವ ಜನತೆ ಇಂದು ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಕವಲು ದಾರಿಯಲ್ಲಿ ನಿಂತು ಪ್ರಶ್ನಾರ್ಥಕವಾಗಿ ನಿಂತಿದೆ! ಮನಸ್ಸಿನ ಸಮಸ್ಥಿತಿಯನ್ನು ಕಳೆದುಕೊಂಡು ಕಳವಳ-ಗೊಂದಲ- ಒತ್ತಡ-ಕಾತರಗಳಿಂದ ಕುಸಿದು ಬಿದ್ದಾಗ ಎದ್ದೇಳಿಸಬಲ್ಲ, ಚೈತನ್ಯವನ್ನು ತುಂಬುವ, ಕರ್ಮಪ್ರವೃತ್ತಿಗೆ ತೊಡಗಿಸಬಲ್ಲ, ಮನೋಬಲವನ್ನು ಚಿಗುರಿಸುವ ಅನನ್ಯ ಮನಶ್ಯಾಸ್ತ್ರಗ್ರಂಥ ಭಗವದ್ಗೀತೆ.
ಭಗವದ್ಗೀತೆಯು ಹೃದಯ ದೌರ್ಬಲ್ಯವನ್ನು ಹತ್ತಿಕ್ಕಿ ಮನೋಬಲವನ್ನು ಹೆಚ್ಚಿಸಿಕೊಳ್ಳಲು ಸಂದೇಶಿಸುತ್ತದೆ. ಭಗವಂತನು ಅರ್ಜುನನಿಗೆ ಮೊತ್ತ ಮೊದಲಿಗೇ ’ಕ್ಷುದ್ರಂ ಹೃದಯ ದೌರ್ಬಲ್ಯಂ ತ್ತ್ಯಕ್ತ್ವೋತ್ತಿಷ್ಠ ಪರಂತಪ’ ಎಂದು ಚುರುಕು ಮುಟ್ಟಿಸುವಂತೆ ನೇರವಾಗಿ, ಕಾದು ಕೆಂಪಗಾದ ಮೊಳೆಗೆ ಸುತ್ತಿಗೆ ಏಟಿನಂತೆ ನುಡಿದು ಯುವಜನತೆಯ ಸಂಕೇತವಾದ ಅರ್ಜುನನನ್ನು ಕರ್ಮಪ್ರವೃತ್ತನಾಗಲು ಪ್ರಚೋದಿಸುತ್ತಾನೆ. ಭಗವದ್ಗೀತೆಯು ನಿವೃತ್ತಿಮಾರ್ಗವನ್ನು ಬೋಧಿಸುತ್ತಿಲ್ಲ. ಗೀತೆಯ ಆಶಯವೇ ಪ್ರವೃತ್ತಿಮಾರ್ಗ. ಮಾನಸಿಕ ಸಂಘರ್ಷದಿಂದ; ದ್ವಂದ್ವಗೊಂದಲಗಳ ತಾಕಲಾಟಗಳಿಂದ, ಮೋಹಕತ್ತಲೆ ಆವರಿಸಿದಲ್ಲಿ ಜ್ಞಾನದ ಪ್ರಖರ ಬೆಳಕು ಚೆಲ್ಲಿ ಕತ್ತಲನ್ನೋಡಿಸಿ ಭರವಸೆಯ ದೀಪಸ್ತಂಭವಾಗಿರುವ ಭಗವದ್ಗೀತೆಯು ಕೈಹಿಡಿದು ಮುನ್ನಡೆಸುತ್ತದೆ. ಭಗವದ್ಗೀತೆಯ ಹಿನ್ನೆಲೆಯಲ್ಲಿರುವ ಕೌರವ ಪಾಂಡವ ಸೇನೆಗಳ ತಾಕಲಾಟದ ಸನ್ನಿವೇಶ ಸಾಂಕೇತಿಕವಾಗಿದೆ. ಮನುಷ್ಯನ ಮನಸ್ಸೇ ರಣರಂಗ. ಇಲ್ಲಿ ಒಳಿತು ಕೆಡಕು, ಧರ್ಮ-ಅಧರ್ಮ; ಕತ್ತಲು-ಬೆಳಕು; ಜಯಾಪಜಯ; ಲಾಭ- ನಷ್ಟ; ಶೀತೋಷ್ಣ; ಮೇಲರಿಮೆ - ಕೀಳರಿಮೆ; ಉಚ್ಚ- ನೀಚಾದಿಗಳೆಂಬ ದ್ವಂದ್ವ ಕಲಹ ನಿತ್ಯ ನಿರಂತರ ಸಾಗುತ್ತಲೇ ಇದೆ.
ಕರ್ತವ್ಯ ಕರ್ಮದ ಕರೆ ಒತ್ತರಿಸಿ ಬಂದಾಗ ಜ್ಞಾನದ ಬೆಳಕಿನಿಂದ ವಂಚಿತನಾದವನು ಕಳವಳ- ಗೊಂದಲ-ಒತ್ತಡ-ಕಾತರ-ವ್ಯಾಕುಲತೆಗಳಿಂದ ಮುಗ್ಗರಿಸುತ್ತಾನೆ. ವಿಶೇಷವಾಗಿ, ಯುವ ಜನತೆ ಇಂದು ಸರಿಯಾದ ಮಾರ್ಗದರ್ಶನದ ಕೊರತೆಯಿಂದ ’ದಾರಿ ಯಾವುದಯ್ಯ ವೈಕುಂಠಕೆ’ ಎಂದು ಕವಲು ದಾರಿಯಲ್ಲಿ ನಿಂತು ಪ್ರಶ್ನಾರ್ಥಕವಾಗಿ ನಿಂತಿದೆ! ಮಾನಸಿಕ ಸನ್ನದ್ಧತೆಯ ಕೊರತೆಯಿಂದ ದಿಕ್ಕೆಟ್ಟ ಮನಸ್ಸಿಗೆ ಭಗವಂತ ಮೊದಲ ಎಚ್ಚರಿಕೆಯೇ ಆತ್ಮಹೀನತೆಯೆಂಬುದು ಕ್ಷುದ್ರವಾದುದು. ಮನೋಬಲ ಕುಸಿತವೆಂಬುದು ವ್ಯಕ್ತಿತ್ವ ಸೌಧದ ಅಡಿಗಲ್ಲು ಜಾರಿದಂತೆ. ಆದ್ದರಿಂದ .ಕಂಗೆಡಬೇಡ.. ಎರಡನೆಯ ಮಾತು ’ಉತ್ತಿಷ್ಟ’ ಎದ್ದೇಳು; ಮೂಲೆ ಸೇರಬೇಡ, ಗೋಣು ಹಾಕಿ ಕೂರಬೇಡ. ಕರ್ತವ್ಯಪರನಾಗು. ಕರ್ಮನಿರತ ನಾಗು. ಕರ್ತವ್ಯಕ್ಕೆ ಬೆನ್ನು ಹಾಕಿ ಓಡಲು ಅಧಿಕಾರವೇ ಇಲ್ಲ. ’ಮಾತೇ ಸಂಗೋಸ್ತು ಅಕರ್ಮಣಿ’, ಕರ್ಮ ಮಾಡದಿರಲು ನಿನಗೆ ಅಧಿಕಾರವಿಲ್ಲ. ಅರ್ಜುನ ನನ್ನು ಭಗವಂತನು ’ಪರಂತಪ’ ಎಂದು ಸಂಬೋಧಿಸುತ್ತಾನೆ. ಶತ್ರುಗಳನ್ನು ತನ್ನ ತಪ-ತಾಪಗಳಿಂದ ಸುಟು ನಾಶಮಾಡಬಲ್ಲ ಪರಮ ಸಮರ್ಥನಿದ್ದಾ ಅರ್ಜುನ. ಅರ್ಜುನ ಎಂಬ ಪದಕ್ಕೆ ’ಬಿಳಿ’, ’ಯಶಸ್ಸು’, ’ಅಜೇಯ’ ಎಂಬ ಅರ್ಥಗಳಿವೆ. ಮೂರು ಲೋಕದ ಗಂಡ, ಮಧ್ಯಮ ಪಾಂಡವ, ಧನಚಿಜಯ, ಫಲ್ಗುಣ, ಸವ್ಯಸಾಚಿ, ಇಂದ್ರಸೂನು ವಾದ ಅರ್ಜುನನಿಗೆ ಶತ್ರುಗಳ ಬಗೆಗೆ ಅಳುಕೆ? ಅಲ್ಲ ಸುತಾರಾಂ ಅಲ್ಲ. ಶತ್ರುಗಳು ಹೊರಗಿಲ್ಲ. ಶತ್ರುಗಳು ಒಳಗೇ ಸೇರಿದ್ದಾರೆ. ಹೊರಗಿನ ಶತ್ರುಗಳ ಬಗೆಗೆ ಅಳುಕಲ್ಲ! ಕಾಮ-ಕ್ರೋಧ-ಲೋಭ-ಮೋಹ-ಮದ- ಮತ್ಸರಗಳೆಂಬ ಆರು ರೀತಿಯ ಶತ್ರುಗಳು ಮನೋಮಂಡಲದಲ್ಲಿ ಘಾಸಿಗೊಳಿಸುತ್ತಿದ್ದಾರೆ. ಅಜ್ಞಾನವೆಂಬ ಕತ್ತಲೆಯಲ್ಲಿ ಮುಗ್ಗರಿಸಿದ್ದಾರೆ. ಈ ಉತ್ಕಟ ಸನ್ನಿವೇಶದಲ್ಲಿ ’ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ’, ’ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ’, ’ವಿಸೃಜ್ಯ ಸಶರಂ ಚಾಪಂ ಶೋಕ ಸಂವಿಗ್ನ ಮಾನಸಃ’, ’ಬಂಧು- ಬಾಂಧವರನ್ನು, ಗುರು ಹಿರಿಯರನ್ನು ಕೊಂದು ಹೆಣಗಳ ಮೇಲೆ ಸಾಮ್ರಾಜ್ಯ ಕಟ್ಟುವ ನರಕವಾಸ ತರವೇ ಕೃಷ್ಣ?’, ಎಂದು ಕಂಗೆಟ್ಟು ದಿಕ್ಕೆಟ್ಟು ಮನೋಬಲ ಕುಸಿದು ಭಗವಂತನ ಪಾದಗಳಿಗೆರಗಿದನು ಅರ್ಜುನ!. ’ಉತ್ತಿಷ್ಠ ಭಾರತ’ ಎಂದು ಕೃಷ್ಣನ ಭರವಸೆಯ ಮಾತು. ಮನುಷ್ಯನ ಮನಸ್ಸನ್ನು ಭಗವದ್ಗೀತೆಯಂತೆ ವಿಶ್ಲೇಷಣೆ ಮಾಡಿದ ಬೇರೊಂದು ಪ್ರಾಚೀನ ಗ್ರಂಥವಿರಲಾರದು. ನಿಜಕ್ಕೂ ಭಗವದ್ಗೀತೆಯು ನಿತ್ಯನೂತನವಾದ ಮನಶ್ಶಾಸ್ತ್ರ ವಿಜ್ಞಾನವಾಗಿದೆ. ನಿಜವಾದ ಕ್ರಿಯಾಶೀಲ ಪ್ರಯುಕ್ತವಾದ, ಆತ್ಮೋದ್ಧಾರವನ್ನು ಬಯಸುವ ಯುವಜನತೆಯು ಬದುಕುವುದಕ್ಕೆ ಹೆದರಿ ಓಡಬಾರದು; ಹೆದರಿ ಹಿಂದೋಡುವುದು ಮಾನವ ಜೀವಿತಕ್ಕೆ ಅವಮಾನ. ’ಕ್ಷತಾತ್ ತ್ರಾಯತೇ ಇತಿ ಕ್ಷತ್ರಿಯ’ ಗಾಯಗೊಂಡವ ನನ್ನು ರಕ್ಷಿಸುವವನೇ ಕ್ಷತ್ರಿಯನಂತೆ. ರಕ್ಷಿಸಬೇಕಾದವನು ಕರ್ತವ್ಯದ ಕರೆ ಬಂದಾಗ ’ಪಲಾಯನ’ ಮಾಡಲು ಅಧಿಕಾರವಿಲ್ಲ. ನಾನು ಕೊಲ್ಲುತ್ತೇನೆ. ನನ್ನಿಂದ ಸಾಯುತ್ತಾರೆ; ನಾನಿಲ್ಲದಿದ್ದರೆ ಗೆಲುವೂ ಇಲ್ಲ. ನಾನೇ ಶ್ರೇಷ್ಠ ಉಳಿದವರೆಲ್ಲ ಕನಿಷ್ಠರು ಎಂಬ ಈ ಪೂರ್ವಗ್ರಹ ಪೀಡೆಗಳು ಅರ್ಜುನನ ತಪ್ಪು ಕಲ್ಪನೆಗಳು. ದೇಹಾಭಿ ಮಾನ-ಅಹಂಕಾರ-ಅಜ್ಞಾನ-ಪರಮ ಸತ್ಯದ ಬಗೆಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು; ಒಳ ಹೊಕ್ಕಿರುವ ಅರಿಷಡ್ವರ್ಗಗಳ ಹಾರಾಟಗಳಿಂದ ಅರ್ಜುನನ ಮನಸ್ಥಿತಿಯು ಅಲ್ಲೋಲಕಲ್ಲೋಲವಾಗಿದೆ. ನಮ್ಮಲ್ಲಿ ಎಲ್ಲರ ಸ್ಥಿತಿಯೂ ಹೀಗೇ ಇದೆ. ಕರ್ತವ್ಯದ ಕರೆ ಬಂದಾಗ ಕಂಗಾಲಾಗುವುದು ಮನೋದೌರ್ಬಲ್ಯ. ಮನಸ್ಸಿನ ಸಮಸ್ಥಿತಿಯನ್ನು ಕಳೆದುಕೊಂಡು ಕಳವಳ-ಗೊಂದಲ-ಒತ್ತಡ-ಕಾತರಗಳಿಂದ ಕುಸಿದು ಬಿದ್ದಾಗ ಎದ್ದೇಳಿಸಬಲ್ಲ, ಚೈತನ್ಯವನ್ನು ತುಂಬುವ, ಕರ್ಮಪ್ರವೃತ್ತಿಗೆ ತೊಡಗಿಸಬಲ್ಲ, ಮನೋಬಲವನ್ನು ಚಿಗುರಿಸುವ ಅನನ್ಯ ಮನಶ್ಯಾಸ್ತ್ರಗ್ರಂಥ ಭಗವದ್ಗೀತೆ. ಭಗವದ್ಗೀತೆಯು ಮೋಕ್ಷ ಶಾಸ್ತ್ರವೂ ಹೌದು; ಜೀವನ ಶಾಸ್ತ್ರವೂ ಹೌದು. ಮನಶ್ಯಾಸ್ತ್ರವೂ ಹೌದು. ಮೋಕ್ಷವೆಂದರೆ ಸ್ಥೂಲವಾಗಿ ಹೇಳುವುದಾದರೆ ಬಿಡುಗಡೆ. ಆಧ್ಯಾತ್ಮಿಕ ಲೋಕದ ಪಾರಮಾರ್ಥಿಕ ಲೋಕದ ’ಮೋಕ್ಷ’ದ ವಿಚಾರವನ್ನು ನಾವಿಲ್ಲಿ ಚರ್ಚಿಸುವುದು ಬೇಡ. ಮೋಕ್ಷವೆಂದರೆ ಬಿಡುಗಡೆ. ಯಾವುದರಿಂದ ಬಿಡುಗಡೆ, ದುಖಃದಿಂದ ಬಿಡುಗಡೆ; ಬಂಧನದಿಂz ಬಿಡುಗಡೆ; ಒತ್ತಡ; ಕಳವಳ; ಆತಂಕ; ಉಸಿರುಗಟ್ಟಿಸುವ ಪರಿಸರದಿಂದ ಬಿಡುಗಡೆ. ಏನು ಜೀವನದರ್ಥ ಎಂಬುದಕ್ಕೆ ಭಗವದ್ಗೀತೆಯು ಸಮರ್ಪಕ ಉತ್ತರ ನೀಡುತ್ತದೆ. ಧರ್ಮವೆ ಜೀವನ; ಕರ್ತವ್ಯ ಕರ್ಮವೇ ಜೀವನದರ್ಥ. ಏರುಜವ್ವನದ ಮೀಹದಲ್ಲಿ ಬಿಸಿಯುಸಿರ ಏರಾಟದಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳೆಂಬ ಜ್ಞಾನೇಂದ್ರಿಯಗಳು ತುಂಟ ಕುದುರೆಗಳಂತೆ ವಿಷಯ ಸುಖಗಳೆಂಬ ಮರೀಚಿಕೆಯ ಬೆಂಬತ್ತಿ ಓಡುತ್ತಲೇ ಇರುತ್ತವೆ. ಓಡಿ ಓಡಿ ಹೈರಾಣಾಗುತ್ತವೆ. ಸೋತು ಸುಣ್ಣವಾಗುತ್ತವೆ. ಕಾಮ-ಕ್ರೋಧ-ಸಂಮೋಹ- ಸ್ಮೃತಿಭ್ರಂಶ-ಬುದ್ಧಿನಾಶಗಳೆಂಬಂತೆ ಜೀವನಕ್ಕೆ ಅರ್ಥವಿಲ್ಲದಂತೆ ತೊಳಲಾಡುತ್ತಾನೆ. ಸುಖವೆಂಬುದು ವಿಷಯ ವಸ್ತುಗಳಲ್ಲಿಲ್ಲ. ಸುಖವೆಂಬುದು ಮನಸ್ಸಿನ ಒಂದು ಸ್ಥಿತಿ. ನಿಜವಾದ ಆನಂದ ಸಾಮ್ರಾಜ್ಯ ಒಳಗಿದೆ; ಹೊರಗಿಲ್ಲ. ಇಂದ್ರಿಯಗಳನ್ನು ಒಳಮುಖವಾಗಿರಿಸಿರಿ. ಒಳಗಿರುವ ಅನಂತ-ಅಸೀಮ ಆನಂದವನ್ನು ಅನುಭವಿಸಬೇಕಾದರೆ ಕಾಡುಸೇರಬೇಕಿಲ್ಲ; ಮೂಗು-ಮುಚ್ಚಿ ಕಣ್ಣು ಮುಚ್ಚಬೇಕಿಲ್ಲ. ಸಂಸಾರತ್ಯಾಗವೂ ಬೇಕಿಲ್ಲ. ಈಸಬೇಕು ಇದ್ದು ಜೈಸಬೇಕು. ’ಕುರುಕರ್ಮತ್ತ್ವಂ’ ಕರ್ತವ್ಯಕರ್ಮವನ್ನು ಮಾಡಲೇ ಬೇಕು. ಆದರೆ ಫಲಾಸಕ್ತಿಯ ಹಂಗನ್ನು ಬಿಟ್ಟು ಮಾಡಬೇಕು. ಪರಮಾತ್ಮನ ಸೇವೆಯೆಂದು, ಸಮರ್ಪಣಾ ಮನೋಭಾವದಿಂದ ಮಾಡಬೇಕು. ಲೋಕಹಿತ ಭಾವನೆಯಿಂದ ಯಜ್ಞದೃಷ್ಟಿಯಿಂದ ಮಾಡಬೇಕು. ಮಾಡುವ ಪ್ರತಿಯೊಂದು ಕೆಲಸವೂ ಪರಮಾತ್ಮನ ಸೇವೆಯೆಂಬ ಮನೋ ಭಾವವಿದ್ದಲ್ಲಿ ಫಲಾಸಕ್ತಿಯ ಬಂಧನವಿರುವುದಿಲ್ಲ. ಏನೇ ಬಂದರೂ ಭಗವಂತನ ಪ್ರಸಾದವೆಂಬ ಭಾವನೆಯಿಂದ ಸ್ವೀಕರಿಸುವ ಭಾವವಿರಬೇಕು. ಆಗ ಮಾತ್ರ ನಷ್ಟ-ಸಂಕಟ-ಸಮಸ್ಯೆಗಳು ಬಂದರೂ ಅವನ್ನು ನಗುನಗುತ್ತಾ ಎದುರಿಸುವ ಮನೋಭಾವ ಕುದುರುತ್ತದೆ. ಭಕ್ತಿಯೆಂಬ ನಂದಾದೀಪದ ಬೆಳಕಿನಲ್ಲಿ, ಜ್ಞಾನಮಾರ್ಗದಲ್ಲಿ ಸಮರ್ಪಣಾ ಮನೋಭಾವ ದಿಂದ ಕರ್ಮ ಪ್ರವೃತ್ತನಾಗಬೇಕು. ಶರಣಾಗತಿ ಹಾಗೂ ಸಮರ್ಪಣಾ ಮನೋಭಾವದಿಂದ ಮಾಡಿದ ಕೆಲಸಗಳು ಬಂಧನದ ಕುಣಿಕೆಗೆ ಸಿಲುಕುವುದಿಲ್ಲ.
’ಜಿತೋ ವಾ ಭೋರ್ಕ್ಷ್ಯಸೇ ಮಹೀಂ ಹತೋವಾ ಪ್ರಾಪ್ಸ್ಯಸಿ ಸ್ವರ್ಗಂ’, ಗೆದ್ದರೆ ರಾಜ್ಯವನ್ನಾಳುವ ಸೌಭಾಗ್ಯವಿದೆ; ಸತ್ತರೂ ಸ್ವರ್ಗ ಸುಖವಿದೆ. ಆದ್ದರಿಂದ ರಣರಂಗಕ್ಕೆ ಬೆನ್ನು ಮಾಡುವಂತಿಲ್ಲ. ’ಎದ್ದೇಳು ಮಾಡು, ಇಲ್ಲವೆ ಮಡಿ’ ಎಂಬ ವೀರ ಕರ್ಮ ಪ್ರವೃತ್ತಿಯ ಗೀತಾಸಂದೇಶ ಎಲ್ಲ ಕಾಲಕ್ಕೆ ಮಾನವ ಕುಲಕ್ಕೆ ಸಲ್ಲುವ ತೇಜಃಪೂರ್ಣವಾದ ಅಮರ ಸಂದೇಶವಾಗಿದೆ. ಇಂದಿನ ಯುವಜನತೆಯ ಕರದೀಪವಾಗಬೇಕು ಭಗವದ್ಗೀತೆ!
June 2nd, 2009 at 4:31 pm
this is realy an inspiration to read Bhagavath Geethe..
October 20th, 2009 at 9:46 pm
jai bhagavath geethe
December 3rd, 2009 at 3:53 am
Good composition to propell people into the greatest world of “JNAANA”…Bhagavaan says in the opening shlokha…
Ashochyananyashosthvam prjnaavaadaamscha bhashase |
Gatasoonagathasoomscha naanushochanthi pandithaha ||
This a greatest opening for any upadesha…in this one shlokha Bhagavaan has kept the complete secret of the solution to our problems…just in two words…naanushochanthi pandithaha…this is the difference (between a man and almighty) in communicating a concept.