ನಮ್ಮ ಎಸ್.ಎಮ್.ಎಸ್. ಸಂದೇಶಗಳು ಸಭ್ಯವಾಗಿರಲಿ
September 17th, 2008.
- ಸುಧಿಂದ್ರ ಜಮ್ಮಟಿಗೆ, ಉಡುಪಿ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಂ |
ಅಬ್ಬಾ ! ಈ ಐವರು ಪುಣ್ಯವಂತ ಸ್ತ್ರೀಯರ ಹೆಸರನ್ನು ಮನಸ್ಸಿನಲ್ಲಿ ಭಕ್ತಿಯಿಂದ ಸ್ಮರಿಸಿಕೊಂಡರೇನೇ ನಾವು ಮಾಡಿದ ಮಹಾಪಾಪಗಳೆಲ್ಲಾ ನಾಶವಾಗುತ್ತವೆ. ಈ ನಂಬಿಕೆಯಿಂದಲೇ ಮನೆಯ ಹಿರಿಯರು ಇಂತಹ ಶ್ಲೋಕಗಳನ್ನು ಮಕ್ಕಳಿಗೆ ಹೇಳಿ ಕೊಡ್ತಾ ಇದ್ರು. ಇದರೊಂದಿಗೆ ರಾಮಾಯಣ, ಮಹಾಭಾರತ, ಇನ್ನಿತರ ಪುರಾಣಗಳ ಪಾತ್ರ ಪರಿಚಯವನ್ನು ಆ ಪುಟಾಣಿ ಹೃದಯಗಳಲ್ಲಿ ಮನದಟ್ಟಾಗುವಂತೆ ಮಾಡ್ತಾ ಇದ್ರು. ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಪ್ರಸಾರ ಮಾಡ್ತಾ ಇದ್ರು. ಆದರೀಗ ಕಾಲ ಬದಲಾಗಿದೆ. ಪುರಾಣಗಳನ್ನು ಹೇಳುವ ಹಿರಿಯರು ಕಡಿಮೆಯಾಗ್ತಾ ಇದ್ದಾರೆ. ಕೇಳುವ ಕಿರಿಯರಂತೂ ಇಲ್ಲವೇ ಇಲ್ಲ ಎನ್ನಬಹುದೇನೋ. ಇದಕ್ಕೆಲ್ಲಾ ಕಾರಣ ಟಿ.ವಿ, ಕಂಪ್ಯೂಟರ್ಗಳ ಹಾವಳಿ, ಮೊಬೈಲುಗಳ ಧಾಳಿ. ಇಷ್ಟೆಲ್ಲಾ ಅಡೆತಡೆಗಳಿದ್ರೂ ರಾಮಾಯಣ, ಮಹಾಭಾರತದ ಸೀತೆ, ದ್ರೌಪದಿಯರ ಹೆಸರು ಇಂದಿಗೂ ಎಲ್ಲರ ಬಾಯಿಯಲ್ಲಿ ಬರ್ತಾ ಇರ್ತಾವೆ ಅಂದ್ರೆ ನಂಬ್ತಿರಾ…? ನೀವು ಮೊಬೈಲ್ ಇದ್ದೋರಾದ್ರೆ ಖಂಡಿತಾ ನಂಬ್ಲೇಬೇಕು. ಹೆಮ್ಮೆಯಿಂದಲ್ಲ ದುಃಖದಿಂದ. ಹೌದು, ಇತ್ತೀಚೆಗೆ ಮೊಬೈಲಿನೊಳಗೆ ಪೌರಾಣಿಕ ಪಾತ್ರಗಳು ಕಾಣಿಸ್ತಾ ಇವೆ. ಉದಾಃ ’ಭವತಿ ಭಿಕ್ಷಾಂ ದೇಹಿ’ ಎಂದು ಸನ್ಯಾಸಿಯೊಬ್ಬ ಭಿಕ್ಷೆ ಕೇಳ್ತಾನೆ. ಗೆರೆಯೊಳಗೇ ನಿಂತು ಭಿಕ್ಷೆ ಹಾಕಲು ಮುಂದಾದ ಮಹಿಳೆಗೆ ’ಗೆರೆ ದಾಟಿ ಬಂದು ಹಾಕು’ ಎಂದಾಗ ಆಕೆ ಹಾಗೇ ಅಲ್ಲಿ ಹಾಕಿದ್ದ ಗೆರೆಯನ್ನು ದಾಟಿದರೆ, ಅವನು ’ನಾನು ಸನ್ಯಾಸಿಯಲ್ಲ ರಾವಣ’ ಎಂದು ಆಕೆಯನ್ನು ಹಿಡಿದುಕೊಳ್ತಾನೆ. ಆಗ ಅವಳು ಅಷ್ಟೇ ಕೂಲಾಗಿ ’ನಾನು ಸೀತೆಯಲ್ಲ, ಅವಳ ಮನೆ ಕೆಲಸದವಳು’ ಎಂದು ಹೇಳುತ್ತಾಳೆ. ಹೀಗೆ ’ಸೀತಾಪಹರಣ’ ವನ್ನು ನೆನಪಿಸುವ ನೆಪದಲ್ಲಿ ಸೀತೆಯ ಹೆಸರನ್ನು ಹೇಳಿಸಿದರೆ, ಸಂಪೂರ್ಣ ಸೀರೆಯನ್ನು ಎಳೆದು ನಿಂತಿದ್ದ ದುಶ್ಯಾಸನನಿಗೆ ದ್ರೌಪದಿಯ ಪ್ರಶ್ನೆ… ’ಏಯ್, ದುಶ್ಯಾಸನ, ಸೀರೆಯನ್ನೇನೋ ಎಳೆದೆ. ಇನ್ನುಳಿದಿದ್ದನ್ನು ಎಳೀಲಿಕ್ಕೆ ನಿಮ್ಮಪ್ಪ ಬರ್ತಾನಾ….?’ ಇದು ದ್ರೌಪದೀ ವಸ್ತ್ರಾಪಹರಣವನ್ನು ಅಣಕಿಸುವುದರೊಂದಿಗೆ ದ್ರೌಪದಿಯ ಹೆಸರನ್ನು ಹೇಳಿಸುವಂತೆ ಮಾಡುವ ಮೆಸೇಜು..
ಇಂತಹ ಮೆಸೇಜುಗಳನ್ನು ಓದುತ್ತಾ ಓದುತ್ತಲೇ ಗೊಳ್ಳನೆ ನಕ್ಕು ಪಕ್ಕದವರಿಗೂ ಹೇಳಿ, ಇನ್ನೊಂದೈದಾದರೂ ಜನರಿಗೆ ಇದೇ ಮೇಸೇಜನ್ನು ’ಫಾರ್ ವರ್ಡ್’ ಮಾಡಿ ಅವರ ಬಾಯಲ್ಲೂ ಆ ಮಹಾಮಾತೆಯರ ಹೆಸರನ್ನು ಹೇಳಿಸಿ ತಾವು ಕೃತಾರ್ಥರೆಂದು ಭಾವಿಸುವವರು ಅದೆಷ್ಟು ಮಂದಿ ಇದ್ದಾರಲ್ವಾ? ಸ್ವಲ್ಪ ಯೋಚಿಸಿ. ಅವತ್ತು ಯಾವ ಆದರಣೀಯರನ್ನು ಭಯ ಭಕ್ತಿಯಿಂದ ಪೂಜಿಸಿ ಆದರ್ಶ ವ್ಯಕ್ತಿಗಳು, ಶ್ರೇಷ್ಠರು ಎಂದು ಭಾವಿಸಿದ್ದರೋ, ಯಾರನ್ನು ಸ್ಮರಿಸಿದರೆ ಮಾಡಿದ ಪಾಪಗಳೆಲ್ಲಾ ನಾಶವಾಗುತ್ತವೆ ಎಂದು ತಿಳಿದಿದ್ದರೋ ಅಂತಹ ಆದರ್ಶಗಳ ಹೆಸರನ್ನು ಯಾವ ಹೆದರಿಕೆ, ಗೌರವವೂ ಇಲ್ಲದೆ ಹೀಗೆ ಅಶ್ಲೀಲವಾಗಿ ಅಸಭ್ಯವಾಗಿ ಬಳಸಿಕೊಳ್ಳುವುದು ಭಾರತೀಯತೆಗೆ ಬUವ ದ್ರೋಹವಲ್ಲದೆ ಮತ್ತೇನು? ದೇಶದ್ರೋಹಿ ಹುಸೇನನಿಗೆ ನೀಡುತ್ತಿರುವ ಪರೋಕ್ಷ ಬೆಂಬಲವಲ್ಲದೆ ಮತ್ತೇನು? ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ಪೌರಾಣಿಕ ಪಾತ್ರಗಳು ’ಸರ್ ದಾರ್ಜೀ ಜೋಕ್ಸ್’ ಗಳಾಗಬಹುದು ಅಲ್ವಾ? ಯಾವನೋ ದಿಕ್ಕುದೆಸೆ ಇಲ್ಲದವನು ಹುಟ್ಟುಹಾಕಿದ ಇಂತಹ ಮೆಸೇಜುಗಳು ಒಬ್ಬನಿಂದ ಹತ್ತಾರು, ನೂರಾರು , ಸಾವಿರಾರು ಜನರಿಗೆ ಯಾವ ಎಗ್ಗಿಲ್ಲದೇ ಹೋಗುವುದನ್ನು ತಡೆಯಲು ಸಾಧ್ಯವೇ ಇಲ್ಲ. ಹಾಗಂತ ಇಂತಹ ಸಮಯದಲ್ಲೂ ನಾವು ಕೈ ಕಟ್ಟಿ ಕುಳಿತುಕೊಳ್ಳುವಂತೆಯೂ ಇಲ್ಲ. ಹಾಗಾದ್ರೆ ನಾವೇನ್ ಮಾಡ್ಬೋದು? ಈ ತರಹದ ಮೆಸೇಜು ಯಾವ ನಂಬರಿನಿಂದ ಬಂದಿರುತ್ತದೋ ಅವರಿಗೊಂದು ಕಾಲ್ ಮಾಡಿ ಅಸಭ್ಯ ಮೆಸೇಜುಗಳನ್ನು ಯಾರಿಗೂ ಕಳುಹಿಸಬಾರದೆಂದು ಹೇಳುವುದು. ಬಂದ ಅಶ್ಲೀಲ ಮೆಸೇಜುಗಳನ್ನು ಡಿಲೀಟ್ ಮಾಡುವುದು. ಇವೆರಡು ನಾವು ಮಾಡಬಹುದಾದ ಸುಲಭವಾದ ಕೆಲಸಗಳು. ಹೀಗೆ ಮಾಡುವುದರ ಮೂಲಕ ಸಾಂಸ್ಕೃತಿಕ ಅವನತಿಯನ್ನು ಸ್ವಲ್ಪವಾದರೂ ತಡೆಹಿಡಿಯಬಹುದು. ಕೊಳಕು ಮೆಸೇಜುಗಳನ್ನು ತಯಾರು ಮಾಡುವವರು ಬರೀ ಪೌರಾಣಿಕ ಪಾತ್ರಗಳನ್ನು ಮಾತ್ರವಲ್ಲ. ಗಾಂಧೀಜಿ,ನೇತಾಜಿ,ರಾಷ್ಟ್ರಕವಿ ಕುವೆಂಪು ಇವರಾರನ್ನೂ ಬಿಟ್ಟಿಲ್ಲ. ಪ್ರಾರಂಭದಲ್ಲಿ ಇಂತಹ ಮೆಸೇಜುಗಳಿಂದ .ಏನೂ ತೊಂದರೆ ಇಲ್ಲಪ್ಪಾ. ಅನ್ನಿಸಿದ್ರೂ ಮುಂದಿನ ದಿನಗಳಲ್ಲಿ ಅವೇ ನಮಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಅಸಭ್ಯ ಮೆಸೇಜುಗಳನ್ನು ಓದಿ ನಗುವವರಲ್ಲಿ ನಾವು ಒಬ್ಬರಾಗುವ ಬದಲು ಅಂತಹವುಗಳನ್ನು ವಿರೋಧಿಸುವವರಾಗೋಣ. ಅದಕ್ಕೇ ಹೇಳಿದ್ದು ನಿಮ್ಮ ಮೊಬೈಲಿನೊಳಗೆ ಸಭ್ಯತೆಯ ಮೇರೆ ಮೀರದ ಮೆಸೇಜುಗಳಿರಲಿ.
September 8th, 2009 at 1:51 am
jlafjsajfsfjsdf
May 20th, 2010 at 4:10 am
super message to all peopele
chandrashekara