ಅವರು ’ಕಾರ್ನಾಡ್’ ಅಲ್ಲ : ಗಿರೀಶ್ ತಮಿಳ್ನಾಡ್ !!
September 17th, 2008.
- ಮಂಜುನಾಥ್, ಆನೆಕೆರೆಬೀದಿ ಮಂಡ್ಯ
’ಬಹುಶಃ ಅವರು ಒಳ್ಳೆಯ ತಾಯಿಗೆ ಹುಟ್ಟಿದ ಮಕ್ಕಳಲ್ಲ. ಮನೆಯಲ್ಲಿ ಒಳ್ಳೆಯ ತಾಯಿ ಇದ್ದಿದ್ರೆ ಅವರು ಹೀಗೆ ಪ್ರತಿಭಟನೆ ಮಾಡತಿರಲಿಲ್ಲ’- ಹೀಗೆ ಅಣಿಮುತ್ತು ಉದುರಿಸಿದ್ದು ಜ್ಞಾನಪೀಠಿ ಅನಂತಮೂರ್ತಿ. ಅವರು ಹೀಗೆ ಹೇಳಿದ್ದು ಕಾವೇರಿ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ಮಂಡ್ಯದ ರೈತರ ಮಕ್ಕಳ ಕುರಿತು. ಸಾಹಿತ್ಯ ಕ್ಷೇತ್ರದ ಅತಿರಥ- ಮಹಾರಥರನ್ನು, ಶ್ರೇಷ್ಠರನ್ನು ಸೈಡಿಗೆ ಹಾಕಿ ಜ್ಞಾನಪೀಠ ’ಪಡೆದುಕೊಂಡವರಿಗೆ’, ರಾಜಕಾರಣವನ್ನು ಬೈಯುತ್ತಲೇ ಯಾರದ್ದೋ ಕೈಕಾಲು ಹಿಡಿದು ಡಾಲರ್ಸ್ ಕಾಲೋನಿಯಲ್ಲಿ ತಮಗೊಂದು ಮನೆ ಗಿಟ್ಟಿಸಿಕೊಂಡವರಿಗೆ ಮಣ್ಣಿನ ಮಕ್ಕಳ ಕುರಿತು, ಅವರ ತಾಯಂದಿರ ಕುರಿತು ಮಾತನಾಡುವ ನೈತಿಕ ಅರ್ಹತೆಯಿಲ್ಲ. ಜ್ಞಾನಪೀಠ ಪಡೆದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಿದ್ದರೆ ಅದವರ ’ಅನಂತ’ ಮೂರ್ಖತನವಷ್ಟೇ. ’ತುಘಲಕ್’ ಕುರಿತು ನಾಟಕ ಬರೆದ ಮಾತ್ರಕ್ಕೆ ಅದೇ ತರ ವರ್ತಿಸಬೇಕು ಅಂತ ಗಿರೀಶ್ ಕಾರ್ನಾಡ್ ಗೆ ಯಾರು ಹೇಳಿಕೊಟ್ಟರೋ ಗೊತ್ತಿಲ್ಲ. ’ವ್ಯವಸಾಯ ಮಾಡೋರಿಗಷ್ಟೇ ಅದರ ಕಷ್ಟ ಗೊತ್ತು. ಒಮ್ಮೆ ಅವರು ವ್ಯವಸಾಯ ಮಾಡಿ ಬಂದು ಮಾತನಾಡಲಿ’ ಅಂತ ಖ್ಯಾತ ಸಾಹಿತಿ, ಚಿಂತಕ ಪೂರ್ಣಚಂದ್ರ ತೇಜಸ್ವಿ ಹೇಳಿದ್ದು ಕಾರ್ನಾಡ್ಗಿನ್ನೂ ಅರ್ಥವಾಗಿಲ್ಲವೇನೋ. ಕಾವೇರಿ ತೀರ್ಪಿನ ಕುರಿತು ಕಾರ್ನಾಡ್ ಮಾತಾಡಿದ್ದು ಸರಿಯೋ ತಪ್ಪೋ ಅನ್ನೋ ವಿಚಾರ ಒತ್ತಟ್ಟಿಗಿರಲಿ. ತೀರ್ಪು ಪ್ರಕಟವಾದಾಗ ಕಾವೇರಿಗಾಗಿ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಮಂಡ್ಯದ ಹಿರಿಯ ಮಾದೇಗೌಡರೇ ’ತೀರ್ಪು ಪೂರ್ತಿ ಓದಿ ಆಮೇಲೆ ಮಾತಾಡ್ತೀನಿ’ ಎಂದರು. ನಾಡಿನ ಮುಖ್ಯ ಮಂತ್ರಿಗಳೇ ಹೇಳಿಕೆ ಕೊಡಲಿಲ್ಲ. ಕಾವೇರಿ ವಿವಾದದ ಒಳ ಹೊರಗು ಗೊತ್ತಿರುವ ನಾಡಿನ ರೈತನಾಯಕರು, ಚಿಂತಕರೇ ತೀರ್ಪು ಕುರಿತು ಚರ್ಚೆಯಲ್ಲಿ ಮಗ್ನರಾಗಿದ್ದರು. ಹೀಗಿರುವಾಗ ಅಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ತಾವೊಬ್ರೇ ಟಿಪ್ಪುಸುಲ್ತಾನ್ ಅನ್ನೋತರ ಇಂಗ್ಲೀಷ್ ಮಾಧ್ಯಮಗಳೆದುರು ಹೇಳಿಕೆ ಕೊಡುವ ಜರೂರತ್ತು ಕಾರ್ನಾಡ್ಗೇನಿತ್ತು? ಹೋಗಲಿ, ತೀರ್ಪು ಓದಿ ಹೇಳ್ತೀನಿ. ಅಂತಲೋ, ರೈತರಿಗೆ ಅನ್ಯಾಯವಾಗದಿರಲಿ ಅಂತಲೋ ಒಂದು ಮಾತು ಹೇಳಿ ಮುಗಿಸಬಹುದಿತ್ತು. ಅದು ಬಿಟ್ಟು ಅನ್ಯಾಯದ ತೀರ್ಪಿನ ಪರ ಮಾತಾಡುವ ಬುದ್ಧಿಜೀವಿತನ (ಸುದ್ದಿಜೀವಿತನ?!) ಏಕೆ?. ದೇಶದ ಸಮಸ್ಯೆಗಳ ಕುರಿತೇ ಎಡಬಿಡಂಗಿ ಮಾತಾಡಿ ಜನರ ಟೀಕೆಗೊಳಗಾದವರು ಇವರು. ಇಂತಹವರಿಂದ ನಾಡು-ನುಡಿಯ ಅಭಿಮಾನ ನಿರೀಕ್ಷಿಸುವುದು ನಮ್ಮದೇ ತಪ್ಪೇನೋ ಸಾಹಿತ್ಯ ಬರೆದ ಮಾತ್ರಕ್ಕೆ ಎಲ್ಲಾ ವಿಷಯಗಳ ಕುರಿತೂ ಮಾತನಾಡುವ ’ಲೈಸೆನ್ಸ್’ ಇದೆ ಅಂತಾನಾ? ಅಷ್ಟಕ್ಕೂ ಎಲ್ಲಾ ವಿಷಯಗಳ ಕುರಿತು ಸರ್ವಾಧಿಕಾರಿ ಧೋರಣೆಯಿಂದ ಮಾತನಾಡುವುದಕ್ಕೆ ಅವರಿಗಿರುವ ಅರ್ಹತೆಗಳೇನು? ಕಾವೇರಿ ಕುರಿತು ಹೇಳಿಕೆ ಕೊಡುವವರು ಒಮ್ಮೆಯಾದ್ರೂ ಮಂಡ್ಯದ ರೈತರ ಕೃಷಿಭೂಮಿಗೆ ಹೋಗಿದ್ದಾರಾ? ತಮಿಳುನಾಡಿಗೆ, ಬೆಂಗಳೂರಿನವರ ನೀರಿಗೆ, ಕಾರಿಗೆ, ಬಾರಿಗೆ ಟಿ.ಎಂ.ಸಿ. ಗಟ್ಟಲೆ ನೀರು ಬಿಡುವ ರೈತರ ಕಷ್ಟ- ಸುಖ ಕೂತು ವಿಚಾರಿಸಿದ್ದಾರಾ?. ಅದಿಲ್ಲವಾದರೆ ಇಂಗ್ಲೀಷ್ ಮಾಧ್ಯಮಕ್ಕೆ ಹೇಳಿಕೆ ಕೊಟ್ಟು ದೇಶಾದ್ಯಂತ ’ಪುಕ್ಕಟೆ ಪ್ರಚಾರ’ ಪಡೆವ ಹುಂಬತನ, ಕೀಳುಮನಸ್ಥಿತಿ ಏಕೆ?.
’ನಾವು ನಾಟಕ, ಕತೆ, ಕಾದಂಬರಿ ಬರೆಯಲಿ ಸಿನಿಮಾದಲ್ಲಿ ನಟಿಸಲಿ, ಏನೇ ಮಾಡಲಿ. ನಾವು ಮಾಡಿದ್ದು ಎಂದು ಬೀಗುವುದು ಮೂರ್ಖತನ. ವಾಸ್ತವದಲ್ಲಿ ನಾವೇನು ಮಾಡಿದ್ದೇವೆ? ಒಂದು ನೂಲನ್ನಾದರೂ ಹೊಸೆದವರಲ್ಲ. ಒಂದು ಜತೆ ಚಪ್ಪಲಿಯನ್ನಾದರೂ ಹೊಲಿದವರಲ್ಲ. ರೈತ ದುಡಿದಿದ್ದನ್ನು ನಾವು ಮೂರು ಹೊತ್ತೂ ಉಣ್ಣುತ್ತಿದ್ದೇವೆ. ಅವರು ದುಡಿಯದಿದ್ದರೆ ಮತ್ತೆ ನಮ್ಮ ನಾಟಕವೂ ಇಲ್ಲ, ಸಾಹಿತ್ಯವೂ ಇಲ್ಲ. ಇದು ಸತ್ಯ’ - ಚಿಂತಕ, ಸಾಹಿತಿ ಕೆ. ವಿ. ತಿರುಮಲೇಶ್ ಅವರ ಮಾತು ’ಜ್ಞಾನಪೀಠ-ಬುದ್ಧಿಜೀವಿ ಬಳಗ’ ಕ್ಕೆ ಅರ್ಥವಾಗಲಿ. ಇಲ್ಲವಾದರೆ ಖಂಡಿತಾ ಇವರನ್ನು ಮಣ್ಣಿನ ಮಕ್ಕಳು ಕ್ಷಮಿಸುವುದಿಲ್ಲ.