ಪ್ರತೀಕ್ಷೆ
September 15th, 2008.
-ಕಮಲಾ ಜಿ. ಹೆಗಡೆ,ಕೊಂಡದಕುಳಿ ಕುಮಟಾ
ತುಳಿದು ತುಳಿಯುತ್ತಲೇ ಓಡುವರು
ಕಾಣುವುದೇ ಇಲ್ಲ ನಾ
ಕಂಡಂತೆ ಕಾಣುಗರ
ಮುಗಿಲಕಡೆ ಮುಖ ಮಾಡಿ
ಬಾಚುತ್ತ ಬಯಕೆಗಳ ಇಹದೆಚ್ಚರವಿಂದೇ
ಕಾಣುವುದೇ ಇಲ್ಲ ನವಿರು
ನಿಸ್ತೇಜ ನಿರ್ಜೀವ ಗಾಳಿಯಲಿ ತೇಲಿದಂತೆ
ನಗುವಿತ್ತು ಲೋಲ, ಲೋಲೆಯರಲಿ
ಕಸುವಿತ್ತು ಕೆಲವರಲಿ
ಬಾನಾಡಿ ಮೃದುಸ್ಪರ್ಷ ಜಿಗಿದಾಡೋ
ಎಳೆಕಂದ ಒಮ್ಮೊಮ್ಮೆ ಮಡಿಲೊಳಗೆ
ಮುನಿಸಿಗೋ.ಮರುಳಿಗೋ..
ಬಾಳಸಂಜೆಯ ಮುಗುಳು ಮುಳುಗು
ಅರಳಿತ್ತು …ಬಾಡಿತ್ತು, ಕಾಣುತೆಲ್ಲವ ನಾ
ಕಾಣದಿರೆ ನನ್ನ ಮೂಕಸಾಕ್ಷಿಯಲೂ
ಅದೇನೋ ಸುಖವಿತ್ತು
ಮರುಕಳಿಸೆ ಮನ್ವಂತರ, ಬಿತ್ತು
ರಾವಣ ಕಣ್ಣು, ಬಲಿ ವಿಫುಲ ವಿಕೃತಿಗೆ
ದಿಗ್ಬಂಧಿ ನಾ ನಾಲ್ಕು ಗೋಡೆಗಳ ಮಧ್ಯೆ
ಗಟ್ಟಿ ಕವಚ ಕಡೆ ಕಡೆದು ವಿಚ್ಛಿಧ್ರ
ನಿಶ್ಯಬ್ಧ, ನೀರವ, ಬೆಚ್ಚಿಬೀಳಿಸುವಷ್ಟು
ನನ್ನುಸಿರೇ ನನ್ನ, ಮೌನ, ಮೌನ ಮೌನ
ಭದ್ರಕೋಟೆಯ ಭೇದಿಸಿ ಸುಳಿಯದು ತಿಳಿಗಾಳಿ
ಕೊಡವಿ ಹೊರಗೋಡಿ ಹೇಗೆ ಸೇರಲಿ ಬಯಲ?
ಬಾಂದೊರೆಯ ಕುಹಕ ನಗು ಚುಚ್ಚಲಾರದೇ ನನ್ನ
ಕಲ್ಲಾದ ಅಹಲ್ಯ ಮರುಹುಟ್ಟು ಪಡೆದಂತೆ
ಜೀವ ತುಂಬಲು ಮತ್ತೆ ಹುಟ್ಟಿ ಬಂದಾನೆ
ಶ್ರೀರಾಮ? ನನ್ನ ಕಂಡಾನೆ? ನನ್ನ ಕಂಡಾನೆ?