ಕಳಕಳಿ
September 15th, 2008.
- ಕಮಲಾ.ಜಿ.ಹೆಗಡೆ, ಕೊಂಡದ ಕುಳಿ ಕುಮಟಾ
(ವಿಶ್ವ ಗೋ-ಸಮ್ಮೇಳನದ ಹಿನ್ನೆಲೆಯಲ್ಲಿ)
ನಿನಗಾಗಿಯೇ ವಿಶ್ವ ವ್ಯಾಪಕ ನೋಟ
ಚರ್ಚಾಕೂಟ ಬಿಸಿಬಿಸಿ ಪಾಯಸದೂಟ
ರಂಗು ರಂಗಿನ ನೋಟ ಭಾವಾವೇಶದ
ಕೂಗಾಟ, ಕೇಳಿಯೂ ಕೇಳದಂತೆ ನೇಪಥ್ಯದಿ.
ನೀ ಅದೇನು ಕೊರತೆ ಕಂಡೆ? ಸುಮ್ಮನಾದೆ?
ಮರದ ನೆರಳಲ್ಲಿ, ಮರಳ ಮಡಿಲಲ್ಲಿ,
ದಿಬ್ಬದಂಚಿನಲಿ, ಮುದುಡಿ ಮುದುಡಿ,
ನಿಶ್ಚಲ, ನಿದ್ದೆ ಈಗ್ಯಾಕೆ, ನಿರ್ಲಕ್ಷ ಸರಿಯೇ?
ಮಲೆನಾಡಗಿಡ್ಡ? ನಕ್ಕೆಯಾ ಮೆಲುಕು ಹಾಕುತ
ಎಲ್ಲಿ ಗೋಮಾಳ? ಮೇಯಲೆಲ್ಲಿದೆ ಗುಡ್ಡ?
ಬಡಬಡಿಸೊ ಜನ ಮರುಳು ಅರಿತಿಲ್ಲ
ನಿಜ ಹುರುಳು, ಅರಿತಾರೇ
ಭ್ರಮೆಯೊಡೆದು, ನೆನಪೆಷ್ಟು ಗಾವುದ ದೂರ?
ಮೊಳಗಿದೆ ಅದೆಂದೊ ಎಚ್ಚರಿಕೆ ಗಂಟೆ
ಅಚ್ಚರಿ ಹುಟ್ಟಿಸಿವೆ ಕಾಂಕ್ರೀಟು ಕಾಡು
ಆರ್ತನಾದ, ಮೊರೆ ಕೇಳಲಾರರು ಬರೀದೇ
ಒಡೆಯಬೇಕೇಕೆ ನೀರ್ಗಣ್ಣ
ಹೇಗಿದ್ದರೇನು, ನೋಡರೆಮ್ಮನು ತಿರುಗಿ
ಸಣ್ಣ ಸಣ್ಣ ತಾನೆಂಬ ಕೀಳರಿಮೆಯೇ?
ಗದ್ದಲದ ನಡುವಲ್ಲೂ, ಸದ್ದಡಗಿದ ಮನೆಯಲ್ಲೂ
ತೆಕ್ಕೈಸಿ ಸಂಗಡಿಗರ ’ಗೊರೆವೆ’, ಸ್ವಚ್ಚಗೊಳಿಸದ
ನೆಲದಿ ಮಲಗಿ, ಸುತ್ತ ಬಯಲಿನಲಿ, ಮತ್ತೆ
ಸಂದಿನಲಿ, ಸೋತ ಕಾಲ್ಗಳ ಮಧ್ಯೆ ದೊಡ್ಡ
ಹೊಟ್ಟೆಯ ಹೊತ್ತು, ನರಳುತ್ತ, ತೆವಳೊ ಮಗು,
ಸಂತೈಸು, ನೇವರಿಸು, ಚಾಚು ಎಲ್ಲೆಡೆ
ಅಮೃತಮಯದಾ ನಾಲಿಗೆಯ
ಜೀವ ಜೀವರಲಿ ಭೇಧವೆಲ್ಲಿಯದು
ಗೊರಸ ನೇವುರದನಾದ ಚಿಮ್ಮುತ್ತ ಇತ್ತಬಾ
ಎತ್ತೆತ್ತಲಿಂದಲೂ ಎಲ್ಲರೊಡ ಗೂಡಿ
ನಾವಿದ್ದೇವೆ ನಿನ್ನ ಕಡೆ ಕಣ್ತೆರೆದು ಜಗನೋಡು
ಬೆಳಕಾಗಿ ಬದಲಾಗಿದೆ ಎಲ್ಲೆಲ್ಲೂ
ಕಾಣುವಿಸ್ಮಯವ