ಅಮ್ಮ
September 15th, 2008.
-ಪ್ರಿಯಾ. ಎಂ. ಕಲ್ಲಬ್ಬೆ ಕುಮಟಾ
’ಹೊರಗೆ ಲೋಕಾಸಕ್ತಿ ಒಳಗೆ ಸಕಲ ವಿರಕ್ತಿ ಅಂತಾರೆ ಡಿ.ವಿ.ಜಿ. ನಿಜಕ್ಕೂ ನನ್ನ ಸ್ಥಿತಿ ಹಾಗೇ ಇದೆ. ಹೊರಗೆಲ್ಲರೂ, ಎಲ್ಲವೂ ಇದೆ. ಪ್ರೀತಿಸುವ ಬದುಕು, ಬಂಧುಗಳು, ಹೆಸರು ಹಣ, ಕೀರ್ತಿ, ಎಲ್ಲವೂ. ಆದರೆ ಒಳಗೆ ಮಾತ್ರ ಈ ವಿರಕ್ತಿ ಬೇಕಾ ಬೇಡವಾ ಅನ್ನೋದು ಪ್ರಶ್ನೆ. ಒಂದಿಷ್ಟು ಪ್ರೀತಿ, ಸ್ನೇಹ ಬದುಕಿಗೆ ಖುಷಿ ಕೊಡುವುದಾದರೆ ಈ ನನ್ನ ಪ್ರೀತಿ ನನ್ಯಾಕಿಷ್ಟು ನೋಯಿಸಿತ್ತು? ಒಂದು ಪುಟ್ಟ ಸ್ನೇಹ ನನ್ನ ಜೀವನವನ್ನೇ ಕಲಕಿ ಬಿಡುತ್ತಾ? ಒಂದು ಪುಟ್ಟ ಪ್ರೀತಿ ನನ್ನ ನೆಮ್ಮದಿಯನ್ನೇ ನಾಶ ಮಾಡಿಬಿಡತ್ತಾ? ವಿರಕ್ತಿ ಯಾವಾಗ ಆರಂಭವಾಯ್ತು? ಏನೂ ಬೇಡ ಯಾರೂ ಬೇಡ ಅನ್ನಿಸೋದು ವಿರಕ್ತಿಯಾ? ವಿರಕ್ತಿಯೆಂದರೆ ನನ್ನೊಳಗಿಂದ ನಾನು ಬೇರೆಯಾಗುವುದಾ? ಮಕ್ಕಳು ನಮ್ಮನ್ನು ಎಂಥಾ ಇಬ್ಬಂದಿಗೆ ಸಿಕ್ಕಿಸಿಬಿಡುತ್ತಾರೆ!. ನೋಡುನೋಡುತ್ತಿದ್ದಂತೆ ಅವರಿಗಾಗೇ ಬದುಕತೊಡಗುತ್ತೇವೆ. ನಮ್ಮೆಲ್ಲ ಪ್ರೀತಿ ಮಮತೆ ಕನಸುಗಳು ಅವರಾಗುತ್ತಾರೆ. ಮತ್ತದೇ ನೋಡ ನೋಡುತ್ತಿದ್ದಂತೇ ಎಲ್ಲವನ್ನೂ ಕರಗಿಸಿ ಹೊರಗೆ ನಡೆದುಬಿಡುತ್ತಾರೆ. ಆ ಅಮ್ಮಾ ಎನ್ನುವ ಕರೆಯಲ್ಲಿ ಅದೆಂತಾ ಶಕ್ತಿಯಿದೆ! ಎಲ್ಲವನ್ನೂ ಸಹಿಸುತ್ತೇವೆ. ಎದೆಬಿರಿಯುವಷ್ಟು ನೋವನ್ನೂ! ಅಗಲುವಿಕೆಯಲ್ಲೂ ಹಾರೈಸುತ್ತೇವೆ, ಕಂದಾ ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರು, ಸಂತೋಷ ವಾಗಿರು. ಜೊತೆಗೆ ಈ ಸ್ವಾರ್ಥ ಯಾಕೆ? ಮಕ್ಕಳೆಲ್ಲಾ ನಮ್ಮಂತಾಗಲೀ, ನಮ್ಮ ಇಷ್ಟಗಳ ನೆರವೇರಿಸುವ ಯಂತ್ರವಾಗಲಿ. ಅದು ಅವರಿಂದ ಬಯಸುವ ಋಣವಾ? ಇಲ್ಲ ಕಣೋ ನನ್ನ ಕಂದಾ, ನಾನಂತೂ ಅಷ್ಟು ಸ್ವಾರ್ಥಿಯಲ್ಲ. ಆದರೂ ಸ್ವಾರ್ಥಿಯೇ. ನೀನು ಸುಖವಾಗಿರಬೇಕು. ಅದರೊಂದಿಗೆ ಆಗಾಗ ನನ್ನ ಕಣ್ಮುಂದೇ ನಗುತ್ತ ಬದುಕಬೇಕು. ಹೋಗಲಿ ಬಿಡು.
ನೀನರಸಿದ ಬದುಕು ಹುಡುಕಿ ಹೊರಹೊರಟಾಗ ನಿನಗೆ ನಾನ್ಯಾಕೆ ತಡೆಯಲಿ? ಅಮ್ಮನ ಪ್ರೀತಿಯಲ್ಲಿ ಮಾತ್ರ ದೋಷ ಹುಡುಕಬೇಡ………’
ಮುಂದಿನ ಸಾಲುಗಳನ್ನು ಅವನಿಂದ ಓದಲಾಗಲಿಲ್ಲ. ಎದೆಯಮೂಲೆಯಲ್ಲೆಲ್ಲೋ ಉಕ್ಕಿದ ಭಾವನೆಗಳನ್ನು ಮರೆಸಲಾಗದೇ ಎದ್ದು
ರೂಮಿಗೆ ಹೊರಟ ವಿಕಾಸ್.
ಪಪ್ಪಾ….. ಮುದ್ದಿನ ಮಗಳು ವಿಧಿ ಓಡಿ ಬಂದು ತೆಕ್ಕೆಗೆ ಬಿದ್ದಳು. ಅವಳನ್ನು ಹಿಡಿಯುವಷ್ಟರಲ್ಲಿ ನೆಲದ ಮೇಲೆ ಮಂಡಿಯೂರಿ ಬಿದ್ದಳು.
ಅಮ್ಮಾ….
ಅವಳನ್ನು ಸಮಾಧಾನಿಸಲು ಅಮ್ಮನೇ ಬರಬೇಕಾಯ್ತು. ಅವರಿಬ್ಬರನ್ನು ಅಷ್ಟಕ್ಕೆ ಬಿಟ್ಟು ಒಳಗೆ ನಡೆದರೂ ಮನಸು ಕೇಳಲಿಲ್ಲ. ವಾಪಸ್ ಬಂದ. ’ವಿಧಿ ಏನಾಯ್ತು? ನನ್ನ ಮುದ್ದು ನೋಯುತ್ತಾ? ನಾನು ಔಷಧಿ ಹಚ್ತೀನಿ ಬಾ. ಡಾಕ್ಟರ್ ಹತ್ತಿರ ಹೋಗೋಣ್ವಾ?’. ವಿಧಿ ಜೋರಾಗಿ ಅತ್ತಳು. ತುಂಬಾ ಹೊತ್ತು ಇಬ್ಬರೂ ಅವಳನ್ನು ಮುದ್ದಿಸಿ ಮಲಗಿಸಿ ಔಷಧ ಹಚ್ಚಿ ಬರುವ ವರೆಗೆ ರಾತ್ರಿ ಹನ್ನೊಂದು ಮೀರಿತ್ತು. ವಿಧಿ ಅಮ್ಮನೂ ನಿದ್ರಿಸಿದ್ದಳು. ಇಂದ್ಯಾಕೊ ನಿದ್ರೆ ಬರುವ ಹಾಗಿಲ್ಲ. ಎದ್ದು ಹೊರಗಿನ ಬಾಲ್ಕನಿಗೆ ಬಂದು ಛೇರ್ ಹಾಕಿ ಕುಳಿತು ಆ ತಂಗಾಳಿಗೆ ಮೈಯೊಡ್ಡಿದರೆ ಅದೆ ತಂಪು ತಂಪು ನೆನಪು…. ಅಮ್ಮ ಬರೆದ ಆ ಸಾಲುಗಳ ಒಳಗಿಂದ ಇಣಕುವ ಅಮ್ಮನ ನೆನಪು……..
ಅಮ್ಮನಿಂದ ಎಷ್ಟು ದೂರ ಬಂದೆ ನಾನು? ಈವತ್ತು ವಿಧಿ ಬಿದ್ದಂತೆ ನಾನೆಷ್ಟು ಬಾರಿ ಬಿದ್ದಿಲ್ಲ? ಮೈ ಕೈ ಊದಿಸಿಕೊಂಡಿಲ್ಲ!
ಪ್ರತೀ ಬಾರಿಯೂ ಅಮ್ಮನ ಪ್ರೀತಿ ಯಿಂದಲೇ ಎದ್ದವನು ನಾನು. ಆ ಪ್ರೀತಿ ಕಾಣದಾಗಿದ್ದು ಯಾವಾಗ? ಅಲ್ಲ ಆ ಪ್ರೀತಿ
ಕಂಡಿದ್ದೇ ಈಗ. ವಿಧಿ ಬಿದ್ದಾಗ. ಹೌದು ಅಮ್ಮನ ಮಡಿಲಿನಿಂದ ಹೊರಬಂದಾಗ ನನ್ನಲ್ಲೆಷು ಭಾವನೆಗಳಿದ್ದವು. ಪ್ರೀತಿಯಿತ್ತು. ಕನಸುಗಳಿತ್ತು. ತುಡಿತವಿತ್ತು. ಎಲ್ಲಾ ಇದ್ದು ದಿನ ದಿನವೂ ಅಮ್ಮನಿಂದ ನಾನ್ಯಾಕೆ ಎಲ್ಲವನ್ನೂ ದೂರದೂರ ಮಾಡುತ್ತಾ ಬಂದೆ? ಅಮ್ಮನೋ ಮಗನ ಬದುಕು, ಭವಿಷ್ಯ, ಕನಸು ಎಲ್ಲಕ್ಕೂ ಮೌನವಾಗಿ ಪ್ರೀತಿಯಾಗಿ ಹಾರೈಕೆಯಾಗಿ ಬದಲಾದಳೇಕೆ? ಅಮ್ಮನೆಂದರೆ ಅರ್ಥ ಅಷ್ಟೂ ತ್ಯಾಗವಾ? ನನಗೆ ಕೊನೆಗೂ ಅವಳ ಮೌನ ಅರ್ಥವಾಗಲೇ ಇಲ್ಲ. ದೂರದೂರ ಮಾಡುತಾ ಬಂದೆ? ಅಮ್ಮನೋ ಮಗನ ಬದುಕು ಭವಿಷ್ಯ ಕನಸು ಎಲ್ಲಕ್ಕೂ ಮೌನವಾಗಿ ಪ್ರೀತಿಯಾಗಿ ಬದಲಾದಳೇಕೆ? ಅಮ್ಮನೆಂದರೆ ಅರ್ಥ ಅಷ್ಟೂ ತ್ಯಾಗವಾ? ನನಗೆ ಕೊನೆಗೂ ಅವಳ ಮೌನ ಅರ್ಥವಾಗಲೇ ಇಲ್ಲ. ದೂರದೂರ ಸಾಗಿಬಂದ ಈ ದಿನ ಇಂದ್ಯಾಕೋ ಅಮ್ಮನ ಬಗೆ ಯೋಚಿಸಬೇಕಾಗಿತ್ತು ಅನ್ನಿಸುತ್ತಿದೆ.
ಹರೆಯ, ಹುಚ್ಚು ಹರೆಯ ಎಂಥವರನ್ನೂ ಬದಲಾಯಿಸಿಬಿಡುತ್ತದೆ. ನಿಜಕ್ಕೂ ಅಪ್ಪ ಅಮ್ಮ ಯಾರಿಗೂ ಅರ್ಥವಾಗದ ಹರೆಯ ಅಂದುಕೊಡುಬಿಟ್ಟೆ. ಅದೇ ಹರೆಯದ ಹದಿಗನಸುಗಳನ್ನೂ ದಾಟಿಬಂದ ಅವರೂ ನನ್ನ ಅರ್ಥೈಸಿಕೊಳ್ಳುತ್ತಾರೆ ಅಂತ ನಾನ್ಯಾಕೆ ಯೋಚಿಸಲಿಲ್ಲ? ಎಲ್ಲಕ್ಕೂ ಮಿಗಿಲಾಗಿ ಅಮ್ಮನಿಂದ ದೂರಾಗಿ ಹೊಸಬದುಕು ಹುಡುಕಿಬಂದ ಈ ನಗರದಲ್ಲಿ ನಂಗೆಲ್ಲಾ ಸಿಕ್ಕರೂ ಒಬ್ಬಳು ಅಮ್ಮ ಸಿಗಲಿಲ್ಲ. ಹೆಂಡತಿ, ಹಣ, ಮಕ್ಕಳು, ಭವಿಷ್ಯ ಎಲ್ಲಾ ಸಿಕ್ಕರೂ ……
ಪ್ರೀತಿಸಿದವಳು ಕೈಕೊಟ್ಟಾಗ ಅಮ್ಮ ಅಂದಿದ್ದಳು. ’ಹೋಗ್ಲಿಬಿಡೋ ವಿಕಾಸ್ ನಿನ್ನ ಅದೃಷ್ಟ ಚೆನ್ನಾಗಿದೆ’. ಅಮ್ಮ
ಅಂದಿದ್ದು ನಿಜವಾಯ್ತು. ಅದೃಷ್ಟ ಚೆನ್ನಾಗಿತ್ತು. ವೀಣಾಳಂತ ಪತ್ನಿ ಸಿಕ್ಕಳು. ವಿಧಿಯಂತ ಮುದ್ದು ಮಗಳು. ಎಲ್ಲರೂ ಬಂದರೂ ಅಮ್ಮನ ಕರೆತರಬೇಕೆಂದು ನಂಗ್ಯಾಕೆ ಅನ್ನಿಸಲಿಲ್ಲ? ನನಗಾಗಿ ತನ್ನೆಲ್ಲ ಬಂಗಾರ ಅಡವಿಟ್ಟು ಹಗಲು ರಾತ್ರಿ ಮನೆ ಮಕ್ಕಳು ಅಂತ ದುಡಿದ ಅಮ್ಮನಿಗೆ ನೌಕರಿ ಸಿಕ್ಕು ಮೊದಲ ಸಂಬಳ ಬಂದಾಗ ಒಂದು ರೂಪಾಯಿ ಎತ್ತಿಡಬೇಕು ಅನ್ನಿಸಲಿಲ್ಲ?. ವೀಣಾಳಿಗೆ ಬಗೆಬಗೆ ಒಡವೆ ಖರೀದಿಸುವಾಗ ಅಮ್ಮ ಮುದುಕಾದಳು, ಅವಳಿಗ್ಯಾಕೆ ಅನ್ನಿಸಿತ್ತು. ಬಟ್ಟೆ ಖರೀದಿಸಿದಾಗ ಅಮ್ಮ ಉಡೋದು ಕಾಟನ್ ಸೀರೆ ಮಾತ್ರ ಅನ್ನಿಸಿತ್ತು!. ಹೋಟೆಲ್ಗಳಲ್ಲಿ ತಿನ್ನುವಾಗ ಅಮ್ಮನಿಗೆ ಮಡಿಮೈಲಿಗೆ ಜಾಸ್ತಿ ಅನ್ನಿಸಿತ್ತು !. ಕಾರಿನಲ್ಲಿ ಓಡಾಡುವಾಗ ನಮ್ಮಿಬ್ಬರ ಮಧ್ಯೆ ಅಮ್ಮನಿಗೆ ಮುಜುಗರ ಆಗಬಾರ್ದು ಅನ್ನಿಸಿತ್ತು! ಅದೇ ಅಮ್ಮ ವಿಧಿ ಚಿಕ್ಕವಳಿದ್ದಾಗ ವೀಣಾ, ವಿಧಿ ಇಬ್ಬರನ್ನೂ ನೋಡ್ಕೊಳ್ಳೋಕೆ ಬಂದ್ರು. ನಾಲ್ಕಾರು ತಿಂಗಳು ಕಳೆದಾಗ ವೀಣಾ ’ಅಮ್ಮನಿಗೆ ಬೇಜಾರ್ ಬಂದೋಯ್ತೇನೋ’ ಅಂದಾಗ ಅಮ್ಮ ’ಹೌದೇ, ನಾಳೇನೆ ಟಿಕೆಟ್ ತಗೊಂಬಾ ವಿಕಾಸ್’ ಅಂದಿದ್ದರು. ಮರುದಿನವೇ ಊರ ಬಸ್ಸು ಹತ್ತಿದ್ದರು ಅಮ್ಮ. ಬೇಜಾರು ಬಂದಿದ್ದು ಯಾರಿಗೇಂತ ನಾನ್ಯಾಕೆ ಯೋಚಿಸಲಿಲ್ಲ
ಅಂದು? ಏನೂ ಮಾಡದ ನಾನು, ಎಲ್ಲಾ ಮಾಡಿದ ಅಮ್ಮ!. ಅಮ್ಮನಿಗಾದ್ರೂ ಮಕ್ಕಳನ್ನು ಬಿಟ್ಟರೆ ಯಾರಿದ್ದರು? ನನಗಾದ್ರೂ ವಿಧಿಯನ್ನ ಬಿಟ್ಟು ನನ್ನ ಅಸ್ತಿತ್ವ ಯೋಚಿಸುವ ಸ್ಥಿತಿಯಲ್ಲಿ ನಾನಿದ್ದೀನಾ? ನಾವಿಬ್ಬರಿಗೂ ಎಲ್ಲಿಂದೆಲ್ಲಿಯ ಸಂಬಂಧ! ಅಮ್ಮ ತ್ಯಾಗದಿಂದಲೇ ಸಂತೋಷ ಹುಡುಕಿದರೆ ನಾನು ಸ್ವಾರ್ಥದಿಂದಲೇ ಅಮ್ಮನ ಸಂತೋಷವ ಹುಡುಕಿಬಿಟ್ಟೆ. ವಿರಕ್ತಿಯಿಂದ ವಿಮುಕ್ತಿಯೆಡೆಗೆ ನಡೆವ ಅಮ್ಮನ ಕಥೆಗಳನ್ನು ಅಲ್ಲಿಯ ವಾತ್ಸಲ್ಯಧಾರೆಯನ್ನೂ ಹಿಡಿದಿಡುವ ಶಕ್ತಿ ನನಗಿಲ್ಲ ಎನ್ನಿಸಿದಾಗಲೇ ಮಕ್ಕಳೆಂದರೆ ಏನೆಂಬುದು ಅರಿವಾಗತೊಡಗಿದ್ದು…….
April 23rd, 2009 at 7:45 pm
Congrats. Olle website open maadi olle lekhanagalannu needuththiddiri.
g.p.ramanna
May 29th, 2009 at 8:59 am
kannalli chakra therta….
November 9th, 2009 at 3:06 am
Nice Article!!!