• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಚಿಂತನ ರಶ್ಮಿ

    ಆನಂದವಾತ್ಮಗುಣ ಮಂಕುತಿಮ್ಮ

    September 15th, 2008.


    -ಮಹಾಬಲ ಭಟ್, ಗೋವಾ

    ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ |

    ಮಾನವಂ ಪ್ರಣಯದೊಳೊ ವೀರವಿಜಯದೊಳೋ |

    ಏನೋ ಎಂತೋ ಸಮಾಧಾನಗಳನರಸುತಿಹ |

    ನಾನಂದವಾತ್ಮ ಗುಣ - ಮಂಕುತಿಮ್ಮ|

    ಪ್ರತಿಯೊಬ್ಬ ಜೀವಿಯ ಪರಮೋದ್ದೇಶ ಆನಂದವೇ. ಜೀವನದಲ್ಲಿ ಆನಂದವನ್ನು ಅನುಭವಿಸಬೇಕು. ಕೊನೆಯಲ್ಲಿ ಆತ್ಯಂತಿಕವಾದ ಆನಂದವನ್ನು ಹೊಂದಬೇಕು ಎಂಬುದೇ ಜೀವನದ ಗುರಿ. ನಾವು ಮಾಡುತ್ತಿರುವ ದೊಂಬರಾಟಗಳೆಲ್ಲ ಈ ಆನಂದವನ್ನು ಪಡೆಯುವುದಕ್ಕೇ. ಹಾಗಾದರೆ ಈ ಆನಂದದ ಸ್ವರೂಪವೇನು? ಅದರ ರಹಸ್ಯವೇನು? ಅದನ್ನು ಪಡೆಯುವ ಬಗೆಯೆಂತು?

    ’ಆನಂದಂ ಬ್ರಹ್ಮೇತಿ ವ್ಯಜಾನಾತ್’ ಎನ್ನುತ್ತದೆ ತೈತ್ತರೀಯ ಸಂಹಿತೆ. ಅಂದರೆ ’ಆನಂದವೇ ಬ್ರಹ್ಮ’ ಎಂಬ ಭಾವ. ಅದೇ ಆತ್ಯಂತಿಕ ಸತ್ಯ. ಅದನ್ನೇ ಉಪನಿಷತ್ತುಗಳು ಚಿದಾನಂದ, ಬ್ರಹ್ಮಾನಂದ ಇತ್ಯಾದಿ ಹೆಸರುಗಳಿಂದ ಕರೆಯುತ್ತವೆ. ಈ ಆತ್ಯಂತಿಕ ಆನಂದವನ್ನು ಪಡೆದವನಿಗೆ ಜಗತ್ತಿನ ಯಾವ ದು:ಖವೂ ತಟ್ಟುವುದಿಲ್ಲ. ಈ ಆನಂದ ದೊರೆಯುವುದೆಲ್ಲಿ? ಹುಟ್ಟಿನಿಂದ ಸಾಯುವವರೆಗೆ ಮಾನವ ತನಗೆ ಸಿಗುವ ಎಲ್ಲ ವಸ್ತುಗಳಲ್ಲೂ, ತನಗೆದುರಾಗುವ ಎಲ್ಲ ಸನ್ನಿವೇಶಗಳಲ್ಲೂ, ಈ ಆನಂದವನ್ನು ಹುಡುಕುತ್ತಾನೆ. ಮೌನವಾಗಿದ್ದರೆ ಅಂತರಂಗದಲ್ಲಿ ಆನಂದವನ್ನನುಭವಿಸಬಹುದೆಂದು ಮೌನವ್ರತವನ್ನು ಸ್ವೀಕರಿಸುತ್ತಾನೆ. ಪ್ರಿಯವ್ಯಕ್ತಿಗಳೊಂದಿಗೆ ಭಾವವನ್ನು ಹಂಚಿಕೊಂಡಾಗ ಆನಂದ ಸಿಗಬಹುದೆಂದು ಮಾತಿಗಿಳಿಯುತ್ತಾನೆ. ಕೆಲವರಿಗೆ ಹಾಸ್ಯ ಆನಂದದಾಯಕವಾಗಿರುತ್ತದೆ. ಮತ್ತೆ ಕೆಲವರು ಹಾಡಿನಲ್ಲಿ ತನ್ಮಯರಾಗಿ ಅನಿರ್ವಚನೀಯ ಅನಂದವನ್ನನುಭವಿಸುತ್ತಾರೆ. ಇನ್ನು ಕೆಲವರಿಗೆ ಪ್ರಣಯಚೇಷ್ಟೆಗಳಿಂದ ಆನಂದ ದೊರೆಯುತ್ತದೆ. ಮತ್ತೆ ಕೆಲ ಬಿಸಿರಕ್ತದ ಯುವಕರಿಗೆ ಶೌರ್ಯಪ್ರದರ್ಶನದಿಂದಲೊ, ವಿಜಯ ಲಾಭದಿಂದಲೋ ಆನಂದ ದೊರಕುತ್ತದೆ. ಹೀಗೆ ಮಾನವ ತನ್ನ ಸಮಾಧಾನಕ್ಕಾಗಿ ಎಲ್ಲೆಲ್ಲೋ ಹುಡುಕುತ್ತಾನೆ. ಆದರೆ ಅವನಿಗೆ ನಿಜವಾದ ಆನಂದ ಸಿಗುತ್ತದೆಯೇ?

    ಸೌಂದರ್ಯವಿರುವುದು ವಸ್ತುವಿನಲ್ಲಲ್ಲ, ನೋಡುವ ಕಣ್ಣಿನಲ್ಲಿ ಎಂಬ ಒಂದು ಮಾತಿದೆ. ಅದೇ ರೀತಿಯಲ್ಲಿಯೇ ಆನಂದವಿರುವುದೂ ನಮ್ಮ ಹೃದಯದಲ್ಲಿ-ಆತ್ಮದಲ್ಲಿ. ಅದು ಆತ್ಮನ ಗುಣ. ಆತ್ಮಾನಂದ ಆತ್ಯಂತಿಕವಾದದ್ದು. ಅದಕ್ಕೆ ಕೊನೆಯಿಲ್ಲ. ತಮಗೊದಗಿದ ಕಷ್ಟದಲ್ಲೂ ಆನಂದವನ್ನನುಭವಿಸುವವರಿದ್ದಾರೆ.

    ಜೈನಯತಿಗಳು ’ಕೇಶಲುಂಚನ’ ಎಂಬ ಮೈಮೇಲಿನ ಕೂದಲನ್ನು ಕೀಳುವ ಆ ವೇದನಾಪೂರ್ಣ ಕ್ರಿಯೆಯಲ್ಲಿಯೇ ಸಂತೋಷವನ್ನು ಕಾಣುತ್ತಾರೆ. ಮಲ್ಲಜಟ್ಟಿಯೋರ್ವನಿಗೆ ಕುಳಿತು ಉಣ್ಣುವುದು ಹಿಡಿಸದು. ಇನ್ನೊಬ್ಬ ಮಲ್ಲನೊಂದಿಗೆ ಹೋರಾಡುವುದೇ ಅವನಿಗೆ ಆನಂದದಾಯಕ. ’ನಗುವಾತ್ಮ ಪರಿಮಳವ ಪಸರಿಸುವ ಕುಸುಮ’. ಆನಂದ ಎಂಬುದು ಎಲ್ಲಾ ರೋಗಗಳಿಗೂ ಮದ್ದು ಎಂಬುದನ್ನು ವೈದ್ಯರೂ ಒಪ್ಪುತ್ತಾರೆ. ’ಸಂತೋಷ ಏವ ಪುರುಷಸ್ಯ ಪರಾ ನಿದಾನಂ’ ಎಂಬ ಮಾತೂ ಅದನ್ನು ಪುಷ್ಟೀಕರಿಸುತ್ತದೆ. ಮನಸ್ಸು ಸಂತೋಷ ಸಮಾಧಾನದಿಂದಿದ್ದಷ್ಟೂ ಆಯುಷ್ಯ ವೃದ್ಧಿಯಾಗುತ್ತದೆ. ಆದ್ದರಿಂದಲೇ ’ಆನಂದವೇ ಬ್ರಹ್ಮ’ ಎನ್ನುವುದು.

    ಪ್ರತಿಕ್ರಿಯಿಸಿ :